‘ನಕ್ಷತ್ರ ವೀಕ್ಷಣೆ’ಗೆ ಮೋಡಗಳ ಅಡ್ಡಿ
ಬೆಂಗಳೂರು : ಖಗೋಳಶಾಸ್ತ್ರ - ನಕ್ಷತ್ರ ಹಾಗೂ ಆಕಾಶಕಾಯಗಳ ಬಗ್ಗೆ ಶ್ರೋತೃಗಳಿಗೆ ಅರಿವು ಮೂಡಿಸಲು ಬೆಂಗಳೂರು ಆಕಾಶವಾಣಿ ಭಾನುವಾರ ರಾತ್ರಿ 8 ಗಂಟೆಗೆ ಏರ್ಪಡಿಸಿದ್ದ 'ನಕ್ಷತ್ರವೀಕ್ಷಣೆ" ನೇರಪ್ರಸಾರಕ್ಕೆ ಮೋಡಗಳು ಅಡ್ಡಿ ಪಡಿಸಿದವು. ನಕ್ಷತ್ರಗಳೇ ಕಾಣದಷ್ಟು ದಟ್ಟವಾಗಿ ಮೋಡಗಳು ಮುಸುಕಿದ್ದ ಕಾರಣ ಈ ಕಾರ್ಯಕ್ರಮ ರದ್ದಾಯಿತು. ಮುಂದಿನ ದಿನಾಂಕ ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಆಕಾಶವಾಣಿ ಕೇಂದ್ರ ಹೇಳಿದೆ.
ಸೋಮವಾರವೂ ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದಿತ್ತು. ಚಳಿಯ ಅನುಭವ. ಸಣ್ಣಗೆ ನಾಲ್ಕು ಹನಿಯೂ ಬಿತ್ತು. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆ ಆಗಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಒಣಹವೆ ಇತ್ತು.
ದೇವನಹಳ್ಳಿ 2 ಸೆಂಟಿ ಮೀಟರ್ ಹಾಗೂ ಬಾಗೇಪಲ್ಲಿ, ಅಜ್ಜಂಪುರಗಳಲ್ಲಿ ತಲಾ ಒಂದು ಸೆಂಟಿ ಮೀಟರ್ ಮಳೆ ಬಿದ್ದಿದೆ. ಉತ್ತರ ಒಳನಾಡಿನ ಕೆಲವುಕಡೆ ಕನಿಷ್ಠ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ. ಕರಾವಳಿಯ ಕೆಲವೆಡೆ ಏರಿಕೆ ಇತ್ತು. ದಕ್ಷಿಣ ಒಳನಾಡಿನಲ್ಲಿ ಕೊಂಚ ಬದಲಾವಣೆ ಕಂಡು ಬಂತು. ಉತ್ತರ ಒಳನಾಡು ಹಾಗೂ ಕರಾವಳಿಯ ಅನೇಕ ಕಡೆಗಳಲ್ಲಿ ತಾಪಮಾನ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಾಗಿತ್ತು.
ಹವಾಮಾನ ವೀಕ್ಷಣಾಲಯ ನೀಡಿರುವ ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆ ಚದುರಿದಂತೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಾಧ್ಯತೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆಯೇ ಮುಂದುವರಿಯಲಿದೆ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಹಗುರವಾಗಿ ಮಳೆ ಬೀಳುವ ನಿರೀಕ್ಷೆ ಇದೆ. ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ.