ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿ
ಬೆಂಗಳೂರು : ದೇಶದ 65 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಅತಿ ಕಡಿಮೆ ಅಪಘಾತದ ಪ್ರಮಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 1999ರ ಸಾಲಿನ ಕೇಂದ್ರ ಸರಕಾರದ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಗೆ ಪಾತ್ರವಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸದಾ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುತ್ತಾ ಬಂದಿದ್ದು, ದೇಶದಲ್ಲೇ ಉತ್ತಮ ಸುರಕ್ಷತಾ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದೆ. ಈ ಸಾಧನೆಗೆ ಕಾರಣವಾದ ಹಾಗೂ ನಗರ ಸಾರಿಗೆಯಲ್ಲಿ 7 ವರ್ಷ ಇಲ್ಲವೇ ಗ್ರಾಮಾಂತರ ಸಾರಿಗೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ ನಿಷ್ಠಾವಂತ ಹಾಗೂ ಸುರಕ್ಷಿತವಾಗಿ ವಾಹನ ಚಲಿಸಿದ 210 ಚಾಲಕರಿಗೆ ಮುಖ್ಯಮಂತ್ರಿಗಳ ಸ್ವರ್ಣ ಪದಕವನ್ನು ಪ್ರದಾನ ಮಾಡಲಾಗುತ್ತಿದೆ.
ಪ್ರಶಸ್ತಿ ಪುರಸ್ಕೃತರಾದ ಚಾಲಕರು ಪದಕದ ಜತೆ 5000 ರುಪಾಯಿ ನಗದು ಹಾಗೂ ಪ್ರತಿ ತಿಂಗಳೂ 100 ರುಪಾಯಿಗಳ ಪ್ರೋತ್ಸಾಹ ಧನವನ್ನೂ ಪಡೆಯಲಿದ್ದಾರೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಅಪಘಾತ ರಹಿತ ಚಾಲಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯ ಆವರಣದಲ್ಲಿ ಸೋಮವಾರ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸ್ವರ್ಣ ಪದಕ ಪ್ರದಾನ ಮಾಡುವರು.
ಇದೇ ಸಂದರ್ಭದಲ್ಲಿ ವೆಸ್ಟಿಬ್ಯೂಲ್ ಮತ್ತು ಹವಾನಿಯಂತ್ರಿತ ಹೈಟೆಕ್ ಬಸ್ಗಳ ಬಿಡುಗಡೆಯೂ ನೆರವೇರಲಿದೆ. ಶಾಂತಿನಗರದ ಶಾಸಕ ಎಂ. ಮುನಿಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿದ್ದು, ಸಾರಿಗೆ ಸಚಿವ ಸಿ.ಆರ್. ಸಗೀರ್ ಅಹ್ಮದ್ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ ಎಂದು ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸುರಕ್ಷತೆಗೆ ಸಾರಿಗೆ ಸಂಸ್ಥೆ ಪ್ರಯತ್ನ : ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಂಸ್ಥೆ ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ಅವುಗಳಲ್ಲಿ ಪ್ರಮುಖವಾದವು ಈ ಕೆಳಕಂಡಂತಿದೆ:
- ಡ್ರೆೃವಿಂಗ್ ಸಿಮ್ಯುಲೇಟರ್ ಬಳಸಿ ಸುರಕ್ಷಾ ಚಾಲನಾ ತರಬೇತಿ
- ಹೆಚ್ಚಿನ ಸುರಕ್ಷತೆಗಾಗಿ ಬಸ್ನಲ್ಲಿ ಪವರ್ ಸ್ಟೇರಿಂಗ್ ಮತ್ತು ವೇಗ ನಿಯಂತ್ರಣಾ ಉಪಕರಣಗಳ ಅಳವಡಿಕೆ
- ಆಯಾಸ ಕಡಿಮೆ ಮಾಡಲು ವಿಶಿಷ್ಟ ವಿನ್ಯಾಸದ ಆಸನಗಳು.
- ಹುಮ್ನಾಬಾದ್ ಮತ್ತು ಹಾಸನಗಳಲ್ಲಿ ಅತ್ಯಾಧುನಿಕ ಚಾಲಕ ತರಬೇ ಟ್ರ್ಯಾಕ್ಗಳು
- ಚಾಲಕರ ಕುಡಿತದ ಹವ್ಯಾಸ ತಪ್ಪಿಸಲು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಮನ್ನಣೆ ಪಡೆದ ವಿಶೇಷ ಕಾರ್ಯಾಸ್ಥಾನ ಮದ್ಯಪಾನ ತಡೆಗಟ್ಟುವ ಕಾರ್ಯಕ್ರಮ.