ಏನು ಮಾಯವೋ.. ಏನು ಮರ್ಮವೋ..
ಬೆಂಗಳೂರೀಗ ಮುಸುಕು ಹೊದ್ದ ಮಾಯಾಂಗನೆ. ಯಾವ ಕ್ಷಣದಲ್ಲಿ ಮುಸುಕು ಸರಿಸಿ ನಗೆದಿಂಗಳ ಚೆಲ್ಲುವಳೋ, ಮರು ಗಳಿಗೆಯೇ ಆಚ್ಛಾದಿತವದನಳಾಗುವಳು. ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಅಂದುಕೊಳ್ಳುತ್ತಲೇ ಕಿರಿಕಿರಿ ಅನುಭವಿಸುವ ಮಹಾನಗರದ ನಾಗರಿಕರಿಗೆ ಬೆಳಕು ನೆಳಲಿನಾಟದ ಸೊಗಸ ಸೊಬಗಿಗಿಂತ ಪಿರಿಪಿರಿ ಮಳೆ ಇಲ್ಲದಿರುವತ್ತಲೇ ಗಮನ. ಹಾಗಾಗಿ, ಜನತೆಯ ಭಾನುವಾರದ ರಜೆ ರೋಡಿಗಿಳಿದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಕರಾರುವಾಕ್ಕಾಗಿ ಹೇಳುವುದಾದರೆ, ನಗರದಲ್ಲೀಗ ಇರುವದು ಮಳೆಮೋಡದ ಹವೆಯಲ್ಲ . ಅಯ್ಯಪ್ಪನ ಹವೆ. ಡಿಸೆಂಬರ್ ಹತ್ತಿರವಾಗುತ್ತಿದ್ದಂತೆಯೇ ಬೆಂಗಳೂರಿನ ತುಂಬಾ ಕಪ್ಪು ವಸ್ತ್ರ ತೊಟ್ಟ ಸ್ವಾಮಿಗಳೇ ಕಾಣುತ್ತಾರೆ. ಮುಂಜಾನೆ ಚಳಿಯ ತೂರಿ ಬರುತ್ತದೆ ಅಯ್ಯಪ್ಪನ ಭಜನೆ. ವರ್ಷದಿಂದ ವರ್ಷಕ್ಕೆ ಅಯ್ಯಪ್ಪ ಭಕ್ತ ರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕನುಗುಣವಾಗಿಯೇ ಮಾರುಕಟ್ಟೆಯ ತುಂಬಾ ನವ ನಮೂನೆಯ ಅಯ್ಯಪ್ಪ ಸುರುಳಿಗಳು, ಸಿನಿಮಾಗಳು ಭಕ್ತರಿಗೆ ಗಾಳವಾಗಲು ಕಾಯುತ್ತಿವೆ. ಆ ಕಾರಣದಿಂದಲೇ ಡಿಸೆಂಬರ್- ಜನವರಿಯನ್ನು ಅಯ್ಯಪ್ಪ ಕಾಲ ಎಂದು ಗುರ್ತಿಸುವುದು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತದೆ. ಇಷ್ಟಕ್ಕೂ ಹವೆ ಅನ್ನುವುದು ಮಳೆಗಾಳಿಗಿಂಥ ಹೆಚ್ಚು ಮನಸ್ಸಿಗೆ ಸಂಬಂಧಿಸಿದ್ದಲ್ಲವೇ.
ಭಾನುವಾರದ ಬಾಹ್ಯ ಹವೆಯ ಬಗೆಯ ಬಗೆಗೇ ಹೇಳುವುದಾದರೆ, ನಾಡಿನಲ್ಲಿ ಎಲ್ಲೂ ದಪ್ಪನೆಯ ಮಳೆಯಾಗಿಲ್ಲ . ಕೆಲವೆಡೆ ಒಂದೆರಡು ಸೆಂಮೀಗಳಷ್ಟು ಹನಿ ಬಿದ್ದಿದೆ. ನಾಳೆ ನಾಳಿದ್ದೂ ಒಣಹವೆ ಮುಂದುವರಿಯುವುದೆಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.