ಕಲ್ಲುಗಣಿಯಲ್ಲಿ ಸಿಡಿಮದ್ದು : ಗ್ರಾಮಸ್ಥರ ಮನೆಗಳಲ್ಲಿ ಬಿರುಕು
ಕಾರವಾರ : ಇಲ್ಲಿನ ಅವರ್ಸಾ ಸಮೀಪದ ಕಲ್ಲುಗಣಿ ಗುತ್ತಿಗೆದಾರರು ಹಣಗಳಿಸುವ ಭರಾಟೆಯಲ್ಲಿ ಕ್ವಾರಿಗಳಲ್ಲಿ ಸಿಡಿ ಮದ್ದು ಸಿಡಿಸುತ್ತಿದ್ದರೆ, ಪರಿಣಾಮವಾಗಿ ಗ್ರಾಮಸ್ಥರ ಮನೆ ಗೋಡೆಗಳು ಬಿರುಕು ಬಿಡುತ್ತಿವೆ.
ಅಂಕೋಲಾ ಸಮೀಪದ ಅವರ್ಸಾ ಬಳಿ ಅನೇಕ ಕ್ವಾರಿಗಳಿವೆ. ಅಲ್ಲಿ ಸದಾ ಸ್ಫೋಟಗೊಳ್ಳುವ ಸಿಡಿಮದ್ದಿನ ಸದ್ದಿನಿಂದಾಗಿ ಸುತ್ತ ಮುತ್ತಲಿನ ಭೂಮಿ ಕಂಪಿಸಲಾರಂಭಿಸುತ್ತದೆ. ಎಷ್ಟೇ ಗಟ್ಟಿ ಗೋಡೆಗಳಾದರೂ ಬಿರುಕು ಬಿಡುತ್ತವೆ. ಶಬ್ದಕ್ಕೆ ಚೀರುವ ಮಕ್ಕಳು. ನಿದ್ದೆ ಯಿಲ್ಲದೆ ನರಳುವ ವೃದ್ಧರು. ನೆಮ್ಮದಿ ಕಳೆದುಕೊಂಡಿರುವ ರೋಗಿಗಳು. ಊರ ನಾಗರೀಕರು ತಮ್ಮ ಗ್ರಾಮದ ಗೋಳನ್ನು ಗ್ರಾಮಾಧಿಕಾರಿಗಳಲ್ಲಿ ತೋಡಿಕೊಂಡಿದ್ದರೂ ಪರಿಣಾಮ ಶೂನ್ಯ.
ಅವರ್ಸಾದ ಹಾರವಾಡ ಮತ್ತು ಸಕಲಬೇಣದ ಮಧ್ಯದಲ್ಲಿನ ಕಲ್ಲುಗುಡ್ಡಗಳಲ್ಲಿ ಗುತ್ತಿಗೆದಾರರು ಬಂಡೆಕಲ್ಲು ತೆಗೆಯಲು ಕೆಲವೊಮ್ಮೆ 15ರಿಂದ 20 ಸರಣಿ ಸ್ಫೋಟಗಳನ್ನು ನಡೆಸುತ್ತಾರೆ. ಇದರಿಂದ ಸುಮಾರು ಎರಡು ಕಿ.ಮೀ. ಸುತ್ತಲಿನ ಮನೆಗಳಲ್ಲಿ , ಅದರಲ್ಲೂ ತಾರಸಿ ಮನೆಗಳಲ್ಲಿ ಬಿರುಕು ಉಂಟಾಗಿದೆ. ಶಬ್ದ ಮಾಲಿನ್ಯ ಮಿತಿ ಮೀರಿದೆ. ಸ್ಫೋಟದಿಂದ ಹೊರ ಹೊಮ್ಮುವ ರಾಸಾಯನಿಕದ ವಾಸನೆಯಿಂದ ಭತ್ತದ ಬೆಳೆಯ ಹೂಗಳು ಕಳಪೆಯಾಗುತ್ತಿವೆ.
ಈ ಭಾಗದ ಭೂಮಿಯಲ್ಲಿ ಉಸುಕಿನ ಪ್ರಮಾಣ ಅಧಿಕ. ಜಿಗುಟುತನ ಕಡಿಮೆ. ಸಮೀಪದಲ್ಲಿಯೇ ಹಾದು ಹೋಗುವ ಕೊಂಕಣ ರೈಲ್ವೆ ಹಳಿಗೆ ಜೋಡಿಸಿರುವ ಫಿಶ್ ಪ್ಲೇಟ್ಗಳು ಭೂಮಿಯ ಕಂಪನದಿಂದ ಸಡಿಲಗೊಂಡು ಅಪಘಾತ ಸಂಭವನೀಯ ಎಂಬ ಆತಂಕವೂ ಉಂಟು. ಅಂಕೆಯಿಲ್ಲದ ಗಣಿಗಾರಿಕೆಯಿಂದಾದ ಸಮಸ್ಯೆಗಳು ಆತಂಕಕ್ಕೆ ಕಾರಣವಾಗಿದೆ.
(ಕಾರವಾರ ಪ್ರತಿನಿಧಿಯಿಂದ)