ಜಿಲ್ಲಾ ಸಾಹಿತ್ಯ ಪರಿಷತ್ತಿಗೂ ಅನುದಾನ - ಚಿಂತನೆ
ಮಾಗಡಿ : ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜ್ಯ ಸರಕಾರ ನೀಡುತ್ತಿರುವ ಅನುದಾನದ ಮಾದರಿಯಲ್ಲೇ ಜಿಲ್ಲಾ ಸಾಹಿತ್ಯ ಪರಿಷತ್ತುಗಳಿಗೂ ಅನುದಾನ ನೀಡುವ ಬಗ್ಗೆ ಸರಕಾರ ಪರಿಶೀಲನೆ ನಡೆಸಲಿದೆ. ಈ ವಿಷಯವನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ.
ಮಾಗಡಿಯ ಕೆಂಪೇಗೌಡ ಬಯಲು ರಂಗಮಂದಿರಲ್ಲಿ ಏರ್ಪಡಿಸಲಾಗಿದ್ದ 6ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಸಚಿವರು ಸಾಹಿತಿಗಳು ಸಂಪನ್ಮೂಲ ಕ್ರೋಡೀಕರಿಸಿಕೊಂಡು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಬೇಕು ಎಂದು ಹೇಳಿದರು.
ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಅವರ ಗೈರುಹಾಜರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಎನ್. ಬಸವಾರಾಧ್ಯ ಅವರು ಈ ಸಂದರ್ಭದಲ್ಲಿ ಮಾಗಡಿ ಐಸಿರಿ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು, ಕವಿ ಡಾ. ಸಿದ್ಧಲಿಂಗಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರೇವಣ್ಣ ಅವರು, ಈ ಬೃಹತ್ ಸಾಂಸ್ಕೃತಿಕ ಉತ್ಸವದ ಸ್ಮರಣೆಯಾಗಿ ಮಾಗಡಿಯಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವವನ್ನೂ ಆಚರಿಸಲಾಯಿತು. ರಾಜ್ಯ 45 ರಾಜ್ಯೋತ್ಸವ ಆಚರಿಸಿದ್ದರೂ, ಕನ್ನಡದ ಏಳಿಗೆ ಎಷ್ಟಾಗಿದೆ ಎಂಬ ಬಗ್ಗೆ ಚಿಂತನೆ ಮಾಡುವುದು ಅಗತ್ಯ ಎಂಬ ಅಭಿಪ್ರಾಯ ಸಮ್ಮೇಳನದಲ್ಲಿ ವ್ಯಕ್ತವಾಯಿತು. ಸಮಾರಂಭದ ನಿಮಿತ್ತ ಪುಸ್ತಕ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
ಮುಖಪುಟ / ಊರು ಕೇರಿ