ವೀರಪ್ಪನ್ ಶಿಕಾರಿಗೆ ಸಜ್ಜಾಗಿದೆ ಗಡಿ ಭದ್ರತಾ ಪಡೆ : ದಿನಕರ್
ಬೆಂಗಳೂರು : ವೀರಪ್ಪನ್ ಶಿಕಾರಿಯಲ್ಲಿ ತೊಡಗಿರುವ ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರ ಜಂಟಿ ಕಾರ್ಯಾಚರಣೆ ಪಡೆಗೆ ಗಡಿ ಭದ್ರತಾ ಪಡೆಯ ತುಕಡಿಗಳು ಮತ್ತಷ್ಟು ಬಲ ನೀಡುವ ಸಂಭವ ಇದೆ. ಬಿಎಸ್ಎಫ್ ತುಕಡಿಗಳು ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ನೆರವಾಗಲು ಸನ್ನದ್ಧವಾಗಿದ್ದು ಯಾವುದೇ ಕ್ಷಣದಲ್ಲಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ.
ಈ ವಿಷಯವನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ತಿಳಿಸಿದ್ದಾರೆ. ಎರಡನೇ ಹಂತದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ) ಆಗಮಿಸುತ್ತದೆ ಎಂದೂ ಅವರು ಹೇಳಿದರು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ನಿಯೋಜಿತವಾಗಿರುವ ವಿಶೇಷ ಪಡೆಯ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು, ವರದಿಗಾರರೊಂದಿಗೆ ಮಾತನಾಡುತ್ತಿದ್ದರು.
ತಮಿಳುನಾಡು ಹಾಗೂ ರಾಜ್ಯ ಸರಕಾರಗಳೆರಡೂ ವೀರಪ್ಪನ್ ಅಟ್ಟಹಾಸವನ್ನು ಮಟ್ಟಹಾಕಲು ಹೊಸ ಕಾರ್ಯತಂತ್ರವನ್ನು ರೂಪಿಸುತ್ತಿದ್ದು, ಈ ಬಗ್ಗೆ ಸಮಗ್ರವಾಗಿ ಚರ್ಚಿಸಲು ಶನಿವಾರ ಬೆಂಗಳೂರಿಗೆ ತಮಿಳುನಾಡಿನಿಂದ ಎಸ್ಟಿಎಫ್ ಉನ್ನತಾಧಿಕಾರಿಗಳು ಆಗಮಿಸುತ್ತಿದ್ದಾರೆ ಎಂದೂ ಅವರು ಹೇಳಿದರು. ರಾಜ್ಯ ಸರಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರಕಾರ ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಸೇರಿದಂತೆ ವಿವಿಧ ರೀತಿಯ ನೆರವು ನೀಡಲು ಮುಂದಾಗಿದೆ ಎಂದೂ ಅವರು ಹೇಳಿದರು.
ಕಾರ್ಯ ಪಡೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ವಿಶೇಷ ಕಾರ್ಯಪಡೆಯ ನೇತೃತ್ವ ವಹಿಸಿರುವ ಸಾಂಗ್ಲಿಯಾನಾ, ಗೃಹ ಕಾರ್ಯದರ್ಶಿ ಎಂ.ಬಿ. ಪ್ರಕಾಶ್ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮುಖಪುಟ / ವೀರಪ್ಪನ್ ಶಿಕಾರಿ