ಬಂಡೀಪರದಲ್ಲಿ 21 ಸೆಂಟಿ ಮೀಟರ್ ಮಳೆ
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಬೀಸಿರುವ ಚಂಡಮಾರುತದ ಪರಿಣಾಮ ಕರ್ನಾಟಕ ರಾಜ್ಯದ ಮೇಲೂ ಆಗಿದ್ದು, ದಕ್ಷಿಣ ಒಳನಾಡಿನ ಅನೇಕಕಡೆ, ಉತ್ತರ ಒಳನಾಡು ಹಾಗೂ ಕರಾವಳಿಯ ತೀರ ಪ್ರದೇಶಗಳಲ್ಲಿ ಚದುರಿದಂತೆ ಮಳೆ ಆಗಿದೆ.
ಸುರಿಯುತ್ತಿರುವ ಭಾರಿ ಮಳೆಗೆ ಮಂಡ್ಯ ಬಳಿ ಹೇಮಾವತಿ ನಾಲೆ ಒಡೆದು ಅಪಾರ ಬೆಳೆ ಹಾನಿಯೂ ಸಂಭವಿಸಿದೆ. ಬಂಡೀಪುರದಲ್ಲಿ 21 ಸೆಂಟಿ ಮೀಟರ್ನಷ್ಟು ಮಳೆ ಆಗಿದ್ದರೆ, ಗುಂಡ್ಲುಪೇಟೆಯಲ್ಲಿ 18 ಸೆಂಟಿ ಮೀಟರ್, ವೀರಾಜಪೇಟೆಯಲ್ಲಿ 12, ನಾಪೋಕ್ಲುವಿನಲ್ಲಿ 8, ಕುಶಾಲನಗರದಲ್ಲಿ 7, ನಂಜನಗೂಡಿನಲ್ಲಿ 6, ಮೂರ್ನಾಡು ಹಾಗೂ ಹೊಳೆ ನರಸೀಪುರಗಳಲ್ಲಿ ತಲಾ 5 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಸೋಮವಾರ ಪೇಟೆ, ಮೈಸೂರು, ಕೆ.ಆರ್.ಎಸ್ಗಳಲ್ಲಿ ತಲಾ 4 ಸೆಂಟಿ ಮೀಟರ್, ಕೆ.ಆರ್. ಪೇಟೆಯಲ್ಲಿ 3 ಸೆಂಟಿ ಮೀಟರ್ ಹಾಗೂ ರಾಜ್ಯದ ಇನ್ನೂ ಅನೇಕ ಪ್ರದೇಶಗಳಲ್ಲಿ 1-2 ಸೆಂಟಿ ಮೀಟರ್ ಮಳೆ ಆಗಿದೆ. ಈ ಮಧ್ಯೆ ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕೊಂಚ ಏರು ಪೇರಾಗಿದೆ. ಅತಿ ಕಡಿಮೆ ತಾಪಮಾನ ಶಿವಮೊಗ್ಗದಲ್ಲಿ 14.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಅನೇಕಕಡೆ ಉತ್ತರ ಒಳನಾಡು ಹಾಗೂ ಕರಾವಳಿಯ ಒಂದೆರಡುಕಡೆ ಚದುರಿದಂತೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ನಿರೀಕ್ಷೆ ಇದೆ. ತಾಪಮಾನದಲ್ಲಿ ಕೂಡ ಬದಲಾವಣೆ ನಿರೀಕ್ಷಿತ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇದ್ದು, ಒಂದೆರಡು ಬಾರಿ ಮಳೆ ಬೀಳುವ ಸಂಭವ ಇದೆ. ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎನ್ನುತ್ತದೆ ಹವಾಮಾನ ವೀಕ್ಷಣಾಲಯದ ವರದಿ.