ಹೇಮವತಿ ನಾಲೆ ಒಡೆದು ಭಾರಿ ಹಾನಿ
ಮೈಸೂರು : ಮಂಡ್ಯ ಸಮೀಪದ ಕಡಬಾ ಹಾಗೂ ಲಿಂಗಾಪುರ ಗ್ರಾಮದ ಬಳಿ ಹೇಮಾವತಿ ಮುಖ್ಯ ನಾಲೆ ಒಡೆದು ತಗ್ಗು ಪ್ರದೇಶದ ಕೃಷಿ ಭೂಮಿಗೆ ನೀರು ನುಗ್ಗಿದ ಪರಿಣಾಮವಾಗಿ 40 -50 ಲಕ್ಷ ರುಪಾಯಿಗಳಷ್ಟು ಬೆಳೆ ನಾಶವಾಗಿದೆ ಎಂದು ಪ್ರಾಥಮಿಕ ಅಂದಾಜು ವರದಿಗಳು ತಿಳಿಸಿವೆ.
ಹೇಮಾವತಿ ಮುಖ್ಯ ನಾಲೆಯ ಹೊಸ ಮತ್ತು ಹಳೆಯ ಎರಡೂ ನಾಲೆಗಳೂ ಹಾನಿಗೊಳಗಾಗಿದ್ದು, ಕಡಬಾ, ಬೋರೇಗೌಡನ ಕೊಪ್ಪಲು, ಲಿಂಗಾಪುರ, ಚಿನಕುರಳಿ, ಕಾಳೇಗೌಡನ ಕೊಪ್ಪಲು, ಹಿಳ್ಳೇನ ಹಳ್ಳಿ ಮೊದಲಾದ ಗ್ರಾಮಗಳ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಗ್ರಾಮದ ಸಂಪರ್ಕ ರಸ್ತೆಗಳಿಗೂ ಕಡಿದುಹೋಗಿವೆ.
ನೆರೆ ರಾಜ್ಯದ ಚಂಡಮಾರುತದ ಪರಿಣಾಮವಾಗಿ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಪರಿಸ್ಥಿತಿ ತೀವ್ರಗೊಂಡಿದೆ. ನಾಲೆ ಮತ್ತಷ್ಟು ಒಡೆಯುವ ಸಾಧ್ಯತೆಗಳೂ ಇದೆ ಎಂಬ ವರದಿಗಳಿವೆ.
ಹೇಮಾವತಿ ನಾಲೆ ಒಡೆದಿರುವುದರಿಂದ ಹೇಮಾವತಿ ಅಣೆಕಟ್ಟೆಯಿಂದ ಬಿಡಲಾಗುವ ನೀರನ್ನು ನಿಲ್ಲಿಸಲಾಗಿದ್ದು, ತುಮಕೂರು ಹಾಗೂ ನಾಗಮಂಗಲದಲ್ಲಿ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳಿವೆ. ತಗ್ಗು ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಹಿರಿಯ ಅಧಿಕಾರಿಗಳು ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾಮಗಾರಿಗೆ ಆದೇಶಿದ್ದಾರೆ.
ಬೆಳೆ ಬಂದಾಗ ಬೆಲೆ ಇಲ್ಲದೆ, ಬೆಲೆ ಇದ್ದಾಗ ಬೆಳೆ ಹಾನಿಗೆ ಒಳಗಾಗುವ ರೈತ ಈ ಬಾರಿ ಪ್ರಕೃತಿ ವಿಕೋಪದಿಂದ ಕಂಗೆಟ್ಟಿದ್ದಾನೆ. ಈಗ ನಾಲೆಯ ಕಳಪೆ ಕಾಮಗಾರಿಯಿಂದಾಗಿ ತಾವು ಭಾರಿ ನಷ್ಟ ಅನುಭವಿಸುವಂತಾಗಿದೆ ಎಂಬುದು ರೈತರ ಆರೋಪ. ನಾಲೆ ಏಕೆ ಒಡೆಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಆದೇಶ ನೀಡಿದ್ದಾರೆ.