ಆಹಾರ ಸರಬರಾಜಿನಲ್ಲಿ ಅಕ್ರಮ : ವರದಿ ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು : ಕೋಲಾರ ಜಿಲ್ಲೆಯ ಅಂಗನವಾಡಿಗಳಿಗೆ ಆಹಾರ ಸಾಮಗ್ರಿ ಸರಬರಾಜು ಮಾಡುವಲ್ಲಿ ಅಧಿಕಾರಿಗಳು ನಡೆಸಿದ್ದಾರೆನ್ನುವ ಅಕ್ರಮಗಳ ಬಗ್ಗೆ ಸಂಪೂರ್ಣ ವರದಿ ಕಳುಹಿಸುವಂತೆ ರಾಜ್ಯ ಹೈಕೋರ್ಟ್ ಗುರುವಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶ ನೀಡಿದೆ.
ನ್ಯಾಯಮೂರ್ತಿ ಜೆ.ಸಿ. ಭರೂಕ ಮತ್ತು ನ್ಯಾಯಮೂರ್ತಿ ರಂಗ ವಿಠಲಾಚಾರ್ ಅವರಿದ್ದ ಜಂಟಿ ನ್ಯಾಯಪೀಠ ಈ ಆದೇಶವನ್ನು ನೀಡಿತು. ಅಂಗನವಾಡಿಗಳಿಗೆ ರವೆ ಸರಬರಾಜು ಮಾಡಿದ ಖಾಸಗಿ ಸಂಸ್ಥೆಯಾಂದಕ್ಕೆ ಸರ್ಕಾರ 60 ಲಕ್ಷ ರುಪಾಯಿ ನೀಡಬೇಕೆಂದು ನಗರದ ಸಿವಿಲ್ ನ್ಯಾಯಾಲಯ ನೀಡಿರುವ ಏಕ ಪಕ್ಷೀಯ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಈ ಆದೇಶ ನೀಡಿದರು. ಸರ್ಕಾರದಿಂದ ಲಕ್ಷಾಂತರ ರುಪಾಯಿ ಬಾಕಿ ಬರಬೇಕೆಂದು ಖಾಸಗಿ ಸಂಸ್ಥೆ ದಾವೆ ಹೂಡಿದರೂ, ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗದ ಬಗ್ಗೆ ನ್ಯಾಯಪೀಠ ದಿಗ್ಭ್ರಮೆ ವ್ಯಕ್ತಪಡಿಸಿತು.
ಒಂದು ಕಿಲೋ ರವೆಗೆ ಸರ್ಕಾರ 7 ರು. ನಿಗದಿ ಮಾಡಿದ್ದರೂ, 9 ರು. ನಂತೆ ರವೆ ಸರಬರಾಜು ಮಾಡಿದ ಕೋಲಾರದ ಬಳಿಯ ನಂದಿ ಸಂಸ್ಥೆ ವ್ಯತ್ಯಾಸದ ಹಣಕ್ಕಾಗಿ ನ್ಯಾಯಾಲಯದ ಕಟ್ಟೆ ಹತ್ತಿತ್ತು . ವಿಚಾರಣೆಯ ಸಂದರ್ಭದಲ್ಲಿ ನೋಟಿಸ್ ಜಾರಿ ಮಾಡಿದಾಗಲೂ ಸರ್ಕಾರದ ಅಧಿಕಾರಿಗಳು ಹಾಜರಾಗದಿದ್ದಾಗ, ಕೋರ್ಟ್ ಏಕ ಪಕ್ಷೀಯವಾಗಿ ನಂದಿ ಸಂಸ್ಥೆಯ ಪರ ತೀರ್ಪು ನೀಡಿತ್ತು . ಆಗ ಎಚ್ಚತ್ತ ಸರ್ಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)