ಚರ್ಚ್ ಬಾಂಬ್ ಸ್ಫೋಟ : ವಿಶೇಷ ನ್ಯಾಯಾಲಯ ಸ್ಥಾಪನೆ?
ಗುಲ್ಬರ್ಗಾ : ಕಳೆದ ಮೇ ಹಾಗೂ ಜೂನ್ ತಿಂಗಳಿನಲ್ಲಿ ರಾಜ್ಯದ ಚರ್ಚ್ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ ನಡೆಸಲು ರಾಜ್ಯ ಸರಕಾರ ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸುವ ಸಾಧ್ಯತೆಗಳು ಇವೆ.
ಹೈದರಾಬಾದ್ ಮೂಲದ ದೀನ್ದಾರ್ ಅಂಜುಮನ್ ಸಂಘಟನೆಯ ಸಂಚನ್ನು ಬಯಲು ಮಾಡುವಲ್ಲಿ ರಾಜ್ಯದ ಸಿಓಡಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧದ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ ಎಂದು ರಾಜ್ಯ ಸರಕಾರದ ಉನ್ನದ ಮೂಲಗಳ ತಿಳಿಸಿವೆ.
ಈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ 16 ಆರೋಪಿಗಳನ್ನು ವಿವಿಧ ನ್ಯಾಯಾಲಯಗಳ ಮುಂದೆ ಹಾಜರು ಪಡಿಸುವಲ್ಲಿ ಆಗಿರುವ ತೊಡಕನ್ನು ಪೊಲೀಸರು ಸರಕಾರದ ಗಮನಕ್ಕೆ ತಂದಿದ್ದಾರೆ. ಗುಲ್ಬರ್ಗಾದ ವಾಡಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನ ಚರ್ಚ್ಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸಂಬಂಧ ಪೊಲೀಸರು 19 ಜನರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದು, 16 ಜನರನ್ನು ಬಂಧಿಸಿದ್ದಾರೆ. ಇನ್ನುಳಿದ ಮೂವರು ಆರೋಪಿಗಳು ಪಾಕಿಸ್ತಾನಿಯರಾಗಿದ್ದಾರೆ. ಬೆಂಗಳೂರಿನಲ್ಲಿ ಸಂಭವಿಸಿದ ಕಾರ್ ಸ್ಫೋಟದಿಂದ ಚರ್ಚ್ ಬಾಂಬ್ ಸ್ಫೋಟದ ಸಂಚು ಬಯಲಾಗಿತ್ತು. (ಯುಎನ್ಐ)