ರಾಜ್ ಪುತ್ರರಿಂದ ಕರುಣಾನಿಧಿ ಭೇಟಿ : ಧನ್ಯವಾದ ಅರ್ಪಣೆ
ಚೆನ್ನೈ : ರಾಜ್ ಪುತ್ರರಿಂದ ಕರುಣಾನಿಧಿ ಭೇಟಿ - ಕೃತಜ್ಞತೆಯ ಸಲ್ಲಿಕೆ, ದೆಹಲಿಯಲ್ಲಿ ಕೃಷ್ಣ - ಜಾರ್ಜ್ ಫರ್ನಾಂಡಿಸ್ ಮಾತುಕತೆ, ವೀರಪ್ಪನ್ ಹುಟ್ಟಡಗಿಸಲು ಕಾರ್ಯತಂತ್ರ, ಮೊದಲು ವೀರಪ್ಪನ್ ಭಾರತದಲ್ಲಿ ಇದ್ದಾನೆಯೇ ಖಾತ್ರಿ ಪಡಿಸಿಕೊಳ್ಳಿ ಎಂಬ ಜಯಲಲಿತಾರ ಹೇಳಿಕೆ ಇದಿಷ್ಟು ರಾಜ್ ಬಿಡುಗಡೆ ನಂತರ ಮಂಗಳವಾರದ ವಿಧ್ಯಮಾನ.
ಕಾಡುಗಳ್ಳ ವೀರಪ್ಪನ್ ಕಪಿಮುಷ್ಟಿಯಿಂದ ತಮ್ಮ ತಂದೆ ಹಾಗೂ ವರನಟ ಡಾ.ರಾಜ್ಕುಮಾರ್ ಅವರನ್ನು ಬಿಡುಗಡೆ ಮಾಡಿಸಲು ಅವಿರತ ಶ್ರಮಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ಡಾ. ರಾಜ್ ಪುತ್ರರಾದ ಶಿವರಾಜ್, ರಾಘವೇಂದ್ರ ಹಾಗೂ ಪುನೀತ್ ಧನ್ಯವಾದ ಅರ್ಪಿಸಿದರು.
ತಮ್ಮ ಕೃತಜ್ಞತೆ ಅರ್ಪಿಸಲೆಂದೇ ಇಲ್ಲಿಗೆ ಆಗಮಿಸಿರುವ ಈ ಮೂವರು ಚಿತ್ರನಟರು ಮಂಗಳವಾರ ಸಂಜೆ ಕರುಣಾನಿಧಿ ಅವರನ್ನು ಅವರ ಗೋಪಾಲಪುರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರುಣಾನಿಧಿ ಅವರನ್ನು ಖುದ್ದಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಲು ತಮ್ಮ ತಂದೆ ಇಚ್ಛಿಸಿದ್ದು, ಅದಕ್ಕಾಗಿ ದಿನಾಂಕ ನಿಗದಿಪಡಿಸಿಕೊಳ್ಳಲು ತಾವು ಇಲ್ಲಿಗೆ ಆಗಮಿಸಿದ್ದಾಗಿ ತಿಳಿಸಿದರು.
ದೆಹಲಿ ವರದಿ : ಈ ಮಧ್ಯೆ ಕಾಡುಗಳ್ಳ ವೀರಪ್ಪನ್ ಅಟ್ಟಹಾಸವನ್ನು ಮಟ್ಟಹಾಕಲು ಕರ್ನಾಟಕದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು, ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಮಾತುಕತೆ ನಡೆಸಿದರು. ವೀರಪ್ಪನ್ ಹಾಗೂ ಅವನ ಸಹಚರರ ಜೀವಂತವಾಗಿ ಹಿಡಿಯಲು ಅಥವಾ ಅವರ ಹುಟ್ಟಡಗಿಸಲು ಕೇಂದ್ರದ ನೆರವನ್ನು ಕೋರಿದರು.
ಚೆನ್ನೈ ವರದಿ : ಕರ್ನಾಟಕ ಹಾಗೂ ತಮಿಳು ನಾಡು ಸರಕಾರಗಳು ವೀರಪ್ಪನ್ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು, ಮೊದಲು ವೀರಪ್ಪನ್ ಭಾರತದಲ್ಲಿ ಇದ್ದಾನೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ಆನಂತರ ಕಾರ್ಯಾಚರಣೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖಪುಟ / ವೀರಪ್ಪನ್ ಶಿಕಾರಿ