ಸೊಗಡಿನ ಅವರೆ ಪೇಟೆಗೆ ಬಂದಿದೆ
ಬೆಂಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ನಿಂತಿದೆ. ಗುಡುಗಿನ ಸದ್ದೂ ಇಲ್ಲ. ಆದರೆ, ಮುಂದುವರಿದ ಒಣಹವೆಯ ನಡುವೆಯೂ ಚಳಿಯ ಅನುಭವ ಎಲ್ಲರಿಗೂ ಆಗುತ್ತಿದೆ.
ಫ್ಯಾನ್, ಎ.ಸಿ.ಗಳ ಬೆಲೆ ಇಳಿದು, ಉಣ್ಣೆ ವಸ್ತ್ರಗಳಿಗೆ ಬೇಡಿಕೆ ಬಂದಿದೆ. ಪೆಟ್ಟಿಗೆ ಸೇರಿದ್ದ ರಂಗು ರಂಗಿನ ಸ್ವೆಟರ್ಗಳು ಮೈಬೆಚ್ಚಗೆ ಮಾಡಿವೆ. ಬೆಳಗಿನ ಚಳಿ, ಸುರಿದ ಮಂಜು ಸೂರ್ಯ ರಶ್ಮಿಯ ಶಾಖ ಏರಿದಂತೆಲ್ಲ ಪ್ರಕೃತಿ ಸಹಜವಾಗಿ ಕರಗುತ್ತಿವೆ. ಸೊಗಡಿನ ಅವರೆ ಕಾಯಿ ಪೇಟೆಗೆ ಬಂದಿದೆ.
ಹೇಳಿ ಕೇಳಿ ಅವರೆಯ ಕಾಲವಲ್ಲವೇ ಇದು. ಸಂಕ್ರಾಂತಿಯವರೆಗೂ ಇನ್ನು ಅವರೆ ಕಾಯಿಯದೇ ಸುಗ್ಗಿ. ಅವರೇ ಕಾಳು ರೊಟ್ಟಿ, ಉಪ್ಪಿಟ್ಟು, ಸಾರು ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಈ ಮಧ್ಯೆ ಬೆಲೆಯೂ ಆಶಾದಾಯಕವಾಗೇ ಇದೆ. ಹಿರಿಯರ ಪ್ರಕಾರ ಇಬ್ಬನಿ ಬೀಳುತ್ತಿದ್ದರೂ, ಅವರೆಯ ಸೊಗಡು ಕೊಂಚ ಕಡಿಮೆ ಆಗಿದೆಯಂತೆ.
ಅಂದಹಾಗೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸ್ವಲ್ಪ ಬದಲಾವಣೆಯೂ ಕಂಡುಬಂದಿದೆ. ರಾಜ್ಯದಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ 13.1 ಡಿಗ್ರಿ ಸೆಲ್ಸಿಯಸ್ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿತ್ತು. ನಾಡಿದ್ದು ಬೆಳಗಿನ ವರೆಗಿನ ಮುನ್ಸೂಚನೆಯಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.