ವೀರಪ್ಪನ್ ಬಂಧನಕ್ಕೆ : ಅಡ್ವಾಣಿ ಜೊತೆ ಕೃಷ್ಣ ಸಮಾಲೋಚನೆ
ನವದೆಹಲಿ : ವೀರಪ್ಪನ್ ಬಂಧನಕ್ಕೆ ತೀವ್ರ ಕಾರ್ಯಾಚರಣೆ ಆರಂಭಿಸಿರುವ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳಿಗೆ ಅಗತ್ಯ ಬಿದ್ದರೆ ಕಮಾಂಡೋ ಪಡೆಯ ನೆರವು ನೀಡವ ಭರವಸೆಯನ್ನು ಗೃಹ ಸಚಿವ ಎಲ್.ಕೆ. ಆಡ್ವಾಣಿ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಕೇಂದ್ರದ ನೆರವು ಪಡೆಯುವ ಸಂಬಂಧ ಸೋಮವಾರ ಕೇಂದ್ರ ಗೃಹಮಂತ್ರಿ ಎಲ್. ಕೆ. ಆಡ್ವಾಣಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಭರವಸೆ ದೊರೆತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆದರೆ, ಸಂಸದೀಯ ಭವನದಲ್ಲಿ 30 ನಿಮಿಷ ಕಾಲ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಅವರು, ಯಾವ ರೀತಿಯ ನೆರವು ಕೋರಲಾಗಿದೆ ಎಂಬುದನ್ನು ವಿವರಿಸಲು ನಿರಾಕರಿಸಿದರು. ವೀರಪ್ಪನ್ ಬಂಧನಕ್ಕೆ ಎರಡೂ ರಾಜ್ಯ ಸರಕಾರಗಳು ನಡೆಸುತ್ತಿರುವ ಯತ್ನಕ್ಕೆ ಕೇಂದ್ರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ದೊರೆತಿರುವುದಾಗಿ ತಿಳಿಸಿದರು.
ಪ್ರಧಾನಿ ಭೇಟಿ : ಎರಡೂ ಸರಕಾರಗಳ ವಿಶೇಷ ಕಾರ್ಯಾಚರಣೆ ಪಡೆಗಳು ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ವೀರಪ್ಪನ್ ವಿಷಯದಲ್ಲಿ ರಾಜ್ಯ ಸರಕಾರದ ನಿಲುವಿಗೆ ತಮಿಳುನಾಡೂ ಕೂಡಾ ಪೂರಕವಾಗಿ ಸ್ಪಂಧಿಸುತ್ತಿದೆ ಎಂದು ಕೃಷ್ಣ ತಿಳಿಸಿದರು. ಈ ಸಂಬಂಧ ಸೋಮವಾರ ಸಂಜೆ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಲಿದ್ದು, ಕಮಾಂಡೋ ಪಡೆ ಕಳಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ವಾರದಿಂದ ಕರ್ನಾಟಕ ಮತ್ತು ತಮಿಳುನಾಡಿನ ಉನ್ನತ ಅಧಿಕಾರಿಗಳ ತಂಡ ಗೃಹಸಚಿವ ಅಡ್ವಾಣಿ ಮತ್ತು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರನ್ನು ಭೇಟಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ