ಪತ್ರಿಕಾ ರಂಗದ ದಿಗ್ಗಜರಿಗೆ ಟೀಎಸ್ಸಾರ್ ಪ್ರಶಸ್ತಿ ಪ್ರದಾನ
ಬೆಂಗಳೂರು : ಕನ್ನಡ ಪತ್ರಿಕಾರಂಗದಲ್ಲಿ ಅವಸ್ಮರಣೀಯ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಎಸ್.ವಿ. ಜಯಶೀಲರಾವ್, ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ಎಂ.ಬಿ. ಸಿಂಗ್ ಅವರಿಗೆ ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿಷ್ಠಿತ ಟೀಎಸ್ಸಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಒಂದು ಲಕ್ಷ ರುಪಾಯಿಗಳ ಚೆಕ್, ಬೆಳ್ಳಿ ಫಲಕ, ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು. ಅನಾರೋಗ್ಯದ ಕಾರಣ ಹಿರಿಯ ಪತ್ರಕರ್ತರಾದ ಪಿ.ಎಲ್. ಬಂಕಾಪುರ ಅವರು ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಬಂಕಾಪುರ ಅವರ ಮನೆಗೇ ಹೋಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಮಾರಂಭದಲ್ಲಿ ಪ್ರಕಟಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ಅವರು, ಸಣ್ಣ ಪತ್ರಿಕೆಗಳಿಗೆ ಸರಕಾರದ ನೆರವು ನೀಡಲು ರಚಿಸಲಾಗಿರುವ ಹಿರಿಯ ಪತ್ರಕರ್ತ ಹಾಗೂ ಶಾಸಕ ಪಿ. ರಾಮಯ್ಯ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಅದಷ್ಟು ಬೇಗ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಕಟಿಸಿದರು.
ದೊಡ್ಡ ಪತ್ರಿಕೆಗಳಿಗೆ ಸರ್ಕಾರದ ನೆರವು ಬೇಕಾಗಿಲ್ಲ, ಆದರೆ, ಜಿಲ್ಲೆಗಳಲ್ಲಿರುವ ಸಣ್ಣ ಹಾಗೂ ಮಧ್ಯಮ ಪತ್ರಿಕೆಗಳಿಗೆ ಸರಕಾರದ ನೆರವು ಅಗತ್ಯ ಎಂದು ಅವರು ಹೇಳಿದರು. ರಾಮಯ್ಯ ನೇತೃತ್ವದ ಸಮಿತಿ ಡಿಸೆಂಬರ್ 2ರಂದು ತನ್ನ ವರದಿ ಸಲ್ಲಿಸಲಿದೆ. ಸರಕಾರ ಆನಂತರ ಇದನ್ನು ಜಾರಿಗೆ ತರಲು ಕ್ರಮ ಕೈಗೊಳ್ಳುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಾರ್ತಾ ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್ ವಹಿಸಿದ್ದರು. ಟೀಎಸ್ಸಾರ್ ಪ್ರಶಸ್ತಿಯನ್ನು ವಿದ್ಯುನ್ಮಾನ ಮಾಧ್ಯಮ (ಇಂಟರ್ನೆಟ್), ಸಣ್ಣ ಪತ್ರಿಕೆಗಳು, ಅಂಕಣಕಾರರು, ನಿಯತಕಾಲಿಕಗಳ ಪತ್ರಕರ್ತರಿಗೂ ವಿಸ್ತರಿಸಬೇಕೆಂಬ ಆಯ್ಕೆ ಸಮಿತಿಯ ಶಿಫಾರಸನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.
ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಶಸ್ತಿಗಳ ವಿತರಣೆಗಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ಸಮಿತಿಯಾಂದನ್ನು ರಚಿಸಲಾಗಿತ್ತು. ಸಮಾರಂಭದಲ್ಲಿ ಡಾ. ಡಿ.ವಿ. ಗುರುಪ್ರಸಾದ್, ಸಚಿವ ಕೃಷ್ಣಪ್ಪ, ನ್ಯಾ. ಸದಾಶಿವ, ಟೀಎಸ್ಸಾರ್ ಅವರ ಧರ್ಮಪತ್ನಿ ಲಲಿತಾ ರಾಮಚಂದ್ರರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ಎಸ್.ವಿ. ಜಯಶೀಲರಾವ್ ಸಂಪಾದಕತ್ವದ ಹಾಗೂ ರಾಜ್ಯ ಪತ್ರಿಕಾ ಅಕಾಡಮಿ ಪ್ರಕಟಿಸಿರುವ ಟೀಎಸ್ಸಾರ್ ಎಂಬ ಕೃತಿಯನ್ನು ಕೃಷ್ಣ ಬಿಡುಗಡೆ ಮಾಡಿದರು.
ಮುಖಪುಟ / ಇವತ್ತು... ಈ ಹೊತ್ತು...