ಆಗಸ್ಟ್ನಲ್ಲಿ ಭಾರತ್ ಸಂಚಾರ ನಿಗಮದಿಂದ ಸೆಲ್ಯುಲರ್ ಫೋನ್ ಸೇವೆ
ಮಂಗಳೂರು : ಕರ್ನಾಟಕ ದೂರಸಂಪರ್ಕ ವಲಯದಲ್ಲಿ ಪ್ರಸಕ್ತ 18 ಲಕ್ಷ ಲೈನ್ಗಳಿದ್ದು, ಇನ್ನು ನಾಲ್ಕು ತಿಂಗಳಲ್ಲಿ ಹೊಸದಾಗಿ 4.25 ಲಕ್ಷ ಲೈನ್ ಸೇರ್ಪಡೆಯಾಗಲಿದೆ.
ಕರ್ನಾಟಕ ದೂರ ಸಂಪರ್ಕ ವಲಯದ ಮುಖ್ಯ ಮಹಾಪ್ರಬಂಧಕ ಟಿ. ರಾಮಮೂರ್ತಿ ಅವರು, ಈ ವಿಷಯವನ್ನು ಮಂಗಳೂರಿನಲ್ಲಿ ಶುಕ್ರವಾರ ತಿಳಿಸಿದರು. ಈ ವರ್ಷ ಕರ್ನಾಟಕ ವಲಯದಲ್ಲಿ ಟೆಲಿಕಾಂ ಅಭಿವೃದ್ಧಿ ಕಾಮಗಾರಿಗಳಿಗೆ 11ಸಾವಿರ ಕೋಟಿ ರುಪಾಯಿ ಖರ್ಚು ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.
ಭಾರತ ಸಂಚಾರ ನಿಗಮ ಜೂನ್ ತಿಂಗಳೊಳಗೆ ರಾಜ್ಯದಲ್ಲಿ ಸೆಲ್ಯುಲರ್ ಫೋನ್ ಸೇವೆ ಒದಗಿಸುವ ಗುರಿ ಹೊಂದಿದೆ, ಮುಂಬರು ಆಗಸ್ಟ್ನಲ್ಲಿ ಈ ಸೌಲಭ್ಯ ಗ್ರಾಹಕರಿಗೆ ದೊರಕಲಿದೆ ಎಂದ ಅವರು, ಭಾರತ ಸಂಚಾರ ನಿಗಮದ ದೂರವಾಣಿ ದರ ಖಾಸಗಿ ಸೆಲ್ಯುಲರ್ ಕಂಪನಿಗಳ ದರಕ್ಕಿಂತ ಕಡಿಮೆ ಇರುತ್ತದೆ ಎಂದರು.
ಸುದ್ದಿಗೋಷ್ಠಿಯ ನಂತರ ಅವರು ದಕ್ಷಿಣ ಕನ್ನಡ ಜಿಲ್ಲಾ ದೂರವಾಣಿ ಮಾರ್ಗದರ್ಶಿ 2000 ಬಿಡುಗಡೆ ಮಾಡಿದರು. ಕಾರ್ಪೋರೇಷನ್ ಬ್ಯಾಂಕ್ ಅಧ್ಯಕ್ಷ ಕೆ. ಚೆರಿಯನ್ ವರ್ಗೀಸ್, ಪಶ್ಚಿಮ ವಲಯ ಐಜಿಪಿ ಡಿ.ಪಿ. ನೇಗಿ, ದಕ್ಷಿಣ ಕನ್ನಡ ದೂರಸಂಪರ್ಕ ಜಿಲ್ಲಾ ಜನರಲ್ ಮೇನೇಜರ್ ಕೆ.ಜೆ. ಚಾಕೋ, ಅಭಿವೃದ್ಧಿ ವಿಭಾಗದ ಜನರಲ್ ಮ್ಯಾನೇಜರ್ ಕೆ. ಬಾಲಕೃಷ್ಣನ್, ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಎಂ. ಹೆಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.