ಮೈಸೂರು: 51 ಟಾಡಾ ಕೈದಿಗಳ ಜತೆ ನೆಡುಮಾರನ್ ಮಾತುಕತೆ
ಮೈಸೂರು : ರಾಜ್ಕುಮಾರ್ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನೆಡುಮಾರನ್ ತಮ್ಮ ಸಂಧಾನದ ಗೆಳೆಯರಾದ ಕೊಳತ್ತೂರು ಮಣಿ, ಪ್ರೊ. ಕಲ್ಯಾಣಿ, ಸುಕುಮಾರನ್ ಅವರೊಡಗೂಡಿ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಟಾಡಾ ಬಂದಿಗಳನ್ನು ಭೇಟಿ ಮಾಡಿ ಅವರ ಕಷ್ಟ ಸುಖ ವಿಚಾರಿಸಿದರು.
ನಾಳೆ ಗಡಿ ಭಾಗವಾದ ಕೊಳತ್ತೂರಿನಲ್ಲಿ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯ ವಿರುದ್ಧ ತಮಿಳು ಸಂಘಟನೆಗಳು ನಡೆಸುತ್ತಿರುವ ಆಂದೋಲನದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗದಲ್ಲಿ ನಿಗದಿತ ಕಾರ್ಯಕ್ರಮದಂತೆ ಮೈಸೂರಿಗೆ ಭೇಟಿ ನೀಡಿದ್ದ ನೆಡುಮಾರನ್ ಈ ಹಿಂದೆ ಎಸ್ಟಿಎಫ್ ಸಿಬ್ಬಂದಿ ಅಮಾಯಕರ ಮೇಲೆ ನಡೆಸಿರುವ ದೌರ್ಜನ್ಯದ ವಿರುದ್ಧ ಇನ್ನೊಂದು ಆಯೋಗ ರಚಿಸಿ ತನಿಖೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ಹಣ ಸಂದಾಯ ಆಗಿಲ್ಲ: ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಅವರು, ರಾಜ್ ಬಿಡುಗಡೆ ಪ್ರಕ್ರಿಯೆಯಲ್ಲಿ ಯಾವುದೇ ಹಣ ಸಂದಾಯ ಆಗಿಲ್ಲ, ತಾವು ಯಾವುದೇ ಅವ್ಯವಹಾರದಲ್ಲಿ ಪಾಲ್ಗೊಂಡಿಲ್ಲ ಎಂದರಲ್ಲದೆ, ಶ್ರೀಲಂಕಾದ ಎಲ್ಟಿಟಿಈ ಪಡೆಗೂ ವೀರಪ್ಪನ್ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಕುಮಾರ್ ಅವರನ್ನು ಬಿಡುಗಡೆ ಮಾಡುವಂತೆ ಎಲ್ಟಿಟಿಈ ನಾಯಕ ಪ್ರಭಾಕರನ್ ಅವರೇ ನಿರ್ದೇಶಿಸಿದ್ದರಂತೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಈ ಸಂದೇಹಾತ್ಮಕ ವರದಿಗಳಿಗೆ ನಾನು ಉತ್ತರಿಸುವುದಿಲ್ಲ ಎಂದರು.
ವೀರಪ್ಪನ್ ಪತ್ತೆಗೆ ಉಪಗ್ರಹ ನೆರವು: ಸೇನೆ ಬಳಸುವ ಅತ್ಯಾಧುನಿಕ ಉಪಕರಣದ ನೆರವಿನಿಂದ ವೀರಪ್ಪನ್ ಬೇಟೆಗೆ ರಾಜ್ಯ ಸರಕಾರ ನಿರ್ಧರಿಸಿದೆ. ಉಪಗ್ರಹ ನೆರವಿನಿಂದ ವೀರಪ್ಪನ್ ಅಡಗುತಾಣವನ್ನು ಪತ್ತೆ ಹಚ್ಚುವ ಯಂತ್ರವನ್ನು ಕೇಂದ್ರದಿಂದ ಪಡೆದು ವಿಶೇಷ ಕಾರ್ಯಪಡೆಗೆ ನೀಡಲಾಗುತ್ತದೆ. ಮಿಗಿಲಾಗಿ ಸಾಂಗ್ಲಿಯಾನರ ಕೋರಿಕೆಯಂತೆ ವಿಶೇಷ ಪಡೆಗೆ ಮತ್ತಷ್ಟು ಸಿಬ್ಬಂದಿಯನ್ನು ನೀಡಲು ಸರಕಾರ ತೀರ್ಮಾನಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಖಪುಟ / ವೀರಪ್ಪನ್ ಶಿಕಾರಿ