ಟಾಡಾ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ
ಬೆಂಗಳೂರು : ಟಾಡಾ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ. ಈ ಸಂಬಂಧ ಶುಕ್ರವಾರ ಅಧಿಕೃತ ಆದೇಶ ಹೊರಬಿದ್ದಿದೆ. ಹೈಕೋರ್ಟ್ನ ರಿಜಿಸ್ಟ್ರಾರ್ ಅವರು ಈ ಆದೇಶ ಹೊರಡಿಸಿದ್ದಾರೆ. ಮೈಸೂರು ಸೆರೆಮನೆಯಲ್ಲಿರುವ ಟಾಡಾ ಬಂದಿಗಳ ಸಂಬಂಧದ ವಿಚಾರಣೆಯನ್ನು ಈವರೆಗೆ ನ್ಯಾಯಮೂರ್ತಿಗಳಾದ ರಾಜೇಂದ್ರ ಪ್ರಸಾದ್ ನಡೆಸುತ್ತಿದ್ದರು.
ಕಾರ್ಯಾಚರಣೆಗೆ ಮಳೆ ಅಡ್ಡಿ : (ಮೈಸೂರು ವರದಿ) ಚಳಿಗಾಲ ಸುರಿಸುತ್ತಿರುವ ಎಡೆಬಿಡದ ತುಂತುರು, ಇಬ್ಬನಿ ವೀರಪ್ಪನ್ ವಿರುದ್ಧದ ಕರ್ನಾಟಕ ಹಾಗೂ ತಮಿಳುನಾಡಿನ ಜಂಟಿ ಎಸ್ಟಿಎಫ್ ಕಾರ್ಯಾಚರಣೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ತಮಿಳುನಾಡಿನ ತುಕಡಿಗಳು ದಿಂಬಂ, ಹಂದಿಯೂರು ಹಾಗೂ ಹಾಸನೂರು ಮೂಲಕ ಕಾಡ ಹೊಕ್ಕಿದ್ದು, ವೀರಪ್ಪನ್ ತಲಾಶೆಯಲ್ಲಿವೆ. ಕರ್ನಾಟಕ ಎಸ್ಟಿಎಫ್ ಮುಖ್ಯಸ್ಥ ಎಚ್.ಟಿ.ಸಾಂಗ್ಲಿಯಾನ ಕಾಡಿನ ನಕಾಶೆಯನ್ನು ಮನಸ್ಸಿಗೆ ತುಂಬಿಕೊಂಡಿದ್ದಾರೆ. ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ, ಪೂರ್ಣ ಪ್ರಮಾಣದ ಶಿಸ್ತುಬದ್ಧ ಕಾರ್ಯಾಚರಣೆಯನ್ನು ಆದಷ್ಟು ಬೇಗ ಪ್ರಾರಂಭಿಸಲಿದ್ದಾರೆ. ಆಯಕಟ್ಟಿನ ಜಾಗೆಗಳಲ್ಲಿ ಕರ್ನಾಟಕದ ತುಕಡಿಗಳು ನಿಗಾ ಇಟ್ಟಿವೆ.
ಕಮಾಂಡೋ ನೆರವು ಯಾಚನೆ : ಎಸ್ಟಿಎಫ್ಗೆ ಸಹಕಾರ ನೀಡಲು ರಾಷ್ಟ್ರೀಯ ಸುರಕ್ಷಣಾ ದಳ(ಎನ್ಎಸ್ಜಿ)ದ ಕಮಾಂಡೋ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈಗಾಗಲೇ ಪತ್ರ ಬರೆದಿದ್ದಾರೆ. ಕರ್ನಾಟಕದ ನಿಯೋಗ ಶುಕ್ರವಾರ ಕೇಂದ್ರ ಗೃಹ ಸಚಿವ ಮತ್ತು ರಕ್ಷಣಾ ಸಚಿವರನ್ನು ಭೇಟಿ ಮಾಡಿ, ವೀರಪ್ಪನ್ ಬಂಧನಕ್ಕೆ ಕೇಂದ್ರದ ನೆರವನ್ನು ಕೋರಿದ್ದಾರೆ.
ಶರಣಾಗತಿ ಬಗ್ಗೆ ಯೋಚಿಸಿಲ್ಲ : ವೀರಪ್ಪನ್ ಶರಣಾಗತಿ ಬಗ್ಗೆ ಮಾಧ್ಯಮದವರಿಂದ ಒಂದೇ ಸಮನೆ ಎರಗುತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಕೃಷ್ಣ ಮುಗುಮ್ಮಾಗಿ ಉತ್ತರಿಸಿದ್ದಾರೆ. ಇದು ಹೊಸ ಆಲೋಚನೆ. ಇದರ ಬಗ್ಗೆ ನಾನು ಯೋಚಿಸಿಯೇ ಇಲ್ಲ. ಈ ವಿಷಯದ ಬಗ್ಗೆ ಚಿಂತನೆ, ಅಧ್ಯಯನ ನಡೆಸುವವರೆಗೆ ಏನೂ ಹೇಳಲಾರೆ ಎಂದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ