ಶಾಲೆಗಳಲ್ಲಿ ಹೆಚ್ಚು ಹೆಚ್ಚು ಶಿಕ್ಷಕಿಯರ ನೇಮಕಕ್ಕೆ ಕರೆ
ಕೆ.ಆರ್. ನಗರ: ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಶಿಕ್ಷಕಿಯರನ್ನೇ ನೇಮಕ ಮಾಡಿದರೆ, ಪ್ರಾಥಮಿಕ ಶಿಕ್ಷಣ ಅಭಿವೃದ್ಧಿ ಹೊಂದುತ್ತದೆ ಎಂದು ರಾಜ್ಯಪಾಲರಾದ ವಿ.ಎಸ್. ರಮಾದೇವಿ ಅಭಿಪ್ರಾಯಪಟ್ಟಿದ್ದಾರೆ. ದೇಶ ಸ್ವಾತಂತ್ರ್ಯ ಪಡೆದು 50 ವರ್ಷಗಳೇ ಕಳೆದಿದ್ದರೂ ಕೂಡ ಮಹಿಳೆ ದೇಶದ ಅಭಿವೃದ್ಧಿಗೆ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಜನರೇ ಆಯ್ಕೆ ಮಾಡಿದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು. ಮಹಿಳೆಗೆ ಸಾಮಾಜಿಕ ನ್ಯಾಯ ದೊರಕಬೇಕು. ಪುರುಷರಷ್ಟೇ ಸರಿಸಮನಾಗಿ ಮಹಿಳೆಯ ದೇಶದ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕಲು ಪುರುಷ ಸಮಾಜ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಸರಕಾರದಿಂದಲೇ ಪ್ರಶಸಿ್ತ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಅವರು ಮಾತನಾಡಿ ಮುಂದಿನ ವರ್ಷದಿಂದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಶಾಲಾ ಶಿಕ್ಷಕರನ್ನು ರಾಜ್ಯ ಸರ್ಕಾರವು ಕೇಲವ ಸರ್ಕಾರಿ ನೌಕರರೆಂದು ತಿಳಿದಿಲ್ಲ. ಶಿಕ್ಷಕರನ್ನು ನಾಡಿನ ಗುರುಗಳು ಎಂದು ಪೂಜ್ಯ ಭಾವದಿಂದ ಕಾಣಲಾಗುತ್ತಿದೆ, ಶಿಕ್ಷಕರೂ ಇದನ್ನು ಅರಿತು, ತಮ್ಮ ವೃತ್ತಿಯ ಘನತೆಯನ್ನು ಕಾಪಾಡಿಕೊಂಡು, ಉತ್ತಮ ಪ್ರಜೆಗಳನ್ನು ನಾಡಿಗೆ ನೀಡಬೇಕೆಂದರು. ಪ್ರಾಯೋಗಿಕವಾಗಿ ನಡೆದ ಈ ಸಮಾರಂಭದಲ್ಲಿ ಜನರು ಹಾಗೂ ವಿದ್ಯಾರ್ಥಿಗಳ ಪಾಲಕರೇ ಆಯ್ಕೆ ಮಾಡಿದ್ದ 40 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ವಿತರಿಸಲಾಯಿತು.