ದಲಿತ ಹೆಣ್ಣುಮಗಳ ಅರೆಬೆತ್ತಲೆ ಮೆರವಣಿಗೆ:11 ಆರೋಪಿಗಳ ಬಂಧನ
ಬೆಂಗಳೂರು : ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿಯಲ್ಲಿ ನಡೆದಿರುವ ದಲಿತ ಮಹಿಳೆಯ ಅರೆಬೆತ್ತಲೆ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಶಾಲಾ ಶಿಕ್ಷಕ ತಿಪ್ಪೇಸ್ವಾಮಿ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹಮಂತ್ರಿ ಮಲ್ಲಿಕಾರ್ಜುನ ಖರ್ಗೆ ವಿಧಾನಪರಿಷತ್ನಲ್ಲಿ ಬುಧವಾರ ಹೇಳಿದ್ದಾರೆ. ಜಾತ್ಯತೀತ ದಳದ ಪ್ರಫುಲ್ಲ ಮಧುಕರ್ ಅವರು ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನ್ನನ್ನು ಗುಂಪೊಂದು ಬಲವಂತವಾಗಿ ಮನೆಯಿಂದ ಹೊರೆಗಳೆದು, ಅಸಭ್ಯ ಮಾತುಗಳಿಂದ ಬೈಯ್ದದ್ದಲ್ಲದೆ ಹಳ್ಳಿಯ ದೇವಸ್ಥಾನದವರೆಗೆ ಅರೆಬೆತ್ತಲೆಯಾಗಿ ಕರೆದುಕೊಂಡು ಹೋಯಿತೆಂದು, ದೌರ್ಜನ್ಯಕ್ಕೊಳಗಾದ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿ ಭೇಟಿ ನೀಡಿದ್ದಾರೆ. ಹಳ್ಳಿಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಪ್ರಮುಖ ಆರೋಪಿ ಶಿಕ್ಷಕನ ವಿರುದ್ಧ ವಿಶೇಷ ತನಿಖೆ ನಡೆಸುವಂತೆ ಶಿಕ್ಷಣ ಸಚಿವರನ್ನು ಕೇಳುವುದಾಗಿ ಖರ್ಗೆ ಹೇಳಿದ್ದಾರೆ.
ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಶಿಕ್ಷಕ ಮತ್ತು ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯ ಕುಟುಂಬದವರ ನಡುವೆ ಉಂಟಾದ ಜಗಳದಿಂದ ಈ ಪ್ರಕರಣ ನಡೆದಿದೆ. ತಿಪ್ಪೇಸ್ವಾಮಿ ಮತ್ತು ಆತನ 10 ಜನ ಸಂಗಡಿಗರು ಸುಮಾರು 50 ಮೀಟರ್ ದೂರವಿರುವ ದೇವಸ್ಥಾನಕ್ಕೆ ಪ್ರಮಾಣ ಮಾಡಲು ಕೇವಲ ಲಂಗ ಮತ್ತು ಕುಪ್ಪುಸದಲ್ಲಿ ಮಹಿಳೆಯನ್ನು ಮೆರವಣಿಗೆಯಲ್ಲಿ ಕರೆದೊಯ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಕಸ್ಟಡಿ ಸಾವು 7 ಮಂದಿ ಸಸ್ಪೆಂಡ್ : ಮೈಸೂರು ಜಿಲ್ಲೆಯ ಬೇರಿಹಳ್ಳಿಯಲ್ಲಿ ನಡೆದಿರುವ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಆರು ಇತರ ಪೊಲೀಸರನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಗೃಹಸಚಿವ ಖರ್ಗೆ ಪರಿಷತ್ತಿನಲ್ಲಿ ತಿಳಿಸಿದ್ದಾರೆ.