ಯುವತಿಯರನ್ನು ವೇಶ್ಯಾವಾಟಿಕೆಗೆ ಎಳೆಯುತ್ತಿದ್ದ ಜಾಲ ಪತ್ತೆ
ಬೆಂಗಳೂರು : ಮೋಜಿನ ಜೀವನಕ್ಕೆ ಯುವತಿಯರನ್ನು ಆಕರ್ಷಿಸಿ, ಅವರನ್ನು ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಸಂಪಂಗಿರಾಮನಗರದ ಪೊಲೀಸರು ಬೇಧಿಸಿದ್ದಾರೆ. ತಿಂಗಳ ಹಿಂದೆ ಕಾಲೇಜು ಆವರಣದಿಂದ ಕಾಣೆಯಾಗಿದ್ದ ಯುವತಿಯಾಬ್ಬಳ್ಳನ್ನು ರಕ್ಷಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಎಂಜಿನಿಯರಿಂಗ್ ಕಾಲೇಜು ಹಾಗೂ ಇನ್ನಿತರ ವೃತ್ತಿಪರ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ಹಾಗೂ ಈ ಜಾಲದಲ್ಲಿ ಪ್ರಮುಖ ಆರೋಪಿಗಳೆನಿಸಿರುವ ನಾಲ್ಕು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ತಂಡದ ಯುವಕರು ಉತ್ತರ ಭಾರತದವರಾಗಿದ್ದು, ಐಷಾರಾಮದ ಜೀವನಕ್ಕಾಗಿ ನಗರದ ಯುವತಿರಿಗೆ ಆಮಿಷ ಒಡ್ಡಿ ಉತ್ತರ ಭಾರತದ ಹಲವು ನಗರಗಳಿಗೆ ಕರೆದೊಯ್ದು ಅವರನ್ನು ಬೇರೆ ಯುವಕರೊಂದಿಗೆ ಸಹವಾಸಕ್ಕೆ ಒತ್ತಾಯಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಾಣೆಯಾಗಿದ್ದ ಬಸವನಗುಡಿಯ ಯುವತಿಯ ತಂದೆ ನೀಡಿದ್ದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ನಗರದ ಪಬ್ ಒಂದರಿಂದ ಈ ಯುವತಿಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ರೂಪಂ, ಆನಂದಪಾಲ್ ಸಿಂಗ್, ಅತೀಕ್ ಹಾಗೂ ಸೂರಜ್ ಲೋಕರೆ ಎಂಬ ಯುವಕರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಗೋಪಾಲ್ ಹೊಸೂರ್ ಅವರು ತಿಳಿಸಿದ್ದಾರೆ. ತಂಡದ ಇನ್ನು ಕೆಲವು ಯುವಕರು ತಲೆ ತಪ್ಪಿಸಿಕೊಂಡಿದ್ದು ಶೋಧ ಮುಂದುವರಿದಿದೆ.
ವೃದ್ಧರ ಸರಣಿ ಕೊಲೆಗಳ ನಂತರ ಪೊಲೀಸರಿಗೆ ಹೊಸ ತಲೆನೋವು ತಂದಿದ್ದ ಈ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ನಗರದ ಪಾತಕಗಳನ್ನು ಹತ್ತಿಕ್ಕಲು ಸಕಲ ಕಾರ್ಯಕ್ರಮಗಳನ್ನೂ ಹಾಕಿಕೊಂಡಿದ್ದಾರೆ.