ಕೇಂದ್ರದ ನೆರವು ಕೋರಲು ಅಧಿವೇಶನದ ನಂತರ ದೆಹಲಿಗೆ ಕೃಷ್ಣ
ಬೆಂಗಳೂರು : ವೀರಪ್ಪನ್ ವಿರುದ್ಧದ ಜಂಟಿ ಕಾರ್ಯಾಚರಣೆಗೆ ಕೇಂದ್ರದ ನೆರವು ಕೋರಲು ಪ್ರಸಕ್ತ ಅಧಿವೇಶನ ಮುಗಿದ ತಕ್ಷಣ ಪ್ರಧಾನಿ ವಾಜಪೇಯಿ ಮತ್ತು ಗೃಹಮಂತ್ರಿ ಅಡ್ವಾಣಿ ಅವರನ್ನು ಭೇಟಿ ಮಾಡಲು ತಾವು ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಚರ್ಚೆಗೆ ಉತ್ತರಿಸುತ್ತಿದ್ದ ಮುಖ್ಯಮಂತ್ರಿಗಳು, ರಾಜ್ಯದ ಗೃಹಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಚರ್ಚಿಸಲಿದ್ದಾರೆ. ಸಾಂಗ್ಲಿಯಾನ ನೇತೃತ್ವದ ಎಸ್ಟಿಎಫ್ ತಂಡ ತಮಿಳುನಾಡು ತಂಡದೊಂದಿಗೆ ಈಗಾಗಲೇ ಮಾದಲ ಸುತ್ತಿನ ಮಾತುಕತೆ ಮುಗಿಸಿದ್ದು, ಬರುವ 25ರಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ತಮಿಳುನಾಡಿಗೆ ತೆರಳಿ , ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸುವರು ಎಂದು ತಿಳಿಸಿದ್ದಾರೆ.
ವೀರಪ್ಪನ್ನನ್ನು ಬಂಧಿಸುವ ವಿಷಯದಲ್ಲಿ ರಾಜ್ಯ ಸರಕಾರ ಬದ್ಧವಾಗಿದ್ದು, ವಿರೋಧ ಪಕ್ಷಗಳಿಂದ ಮುಕ್ತವಾಗಿ ಸಲಹೆಗಳನ್ನು ಸ್ವೀಕರಿಸುವುದಾಗಿ ಹೇಳಿರುವ ಕೃಷ್ಣ, ಅಪಹರಣಕಾರಿಗೆ ಎಲ್ಟಿಟಿಈ ಮತ್ತು ಐಎಸ್ಐ ಸೇರಿದಂತೆ ಇತರ ದೇಶವಿರೋಧಿ ಸಂಘಟನೆಗಳ ಜೊತೆ ಸಂಪರ್ಕವಿರುವ ಬಗೆಗಿನ ಎಲ್ಲ ಸಾಧ್ಯತೆಗಳ ಬಗ್ಗೆ ಕಣ್ಣಿಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.