ಅಕ್ರಮ ಆಸ್ತಿ : ಬಂಗಾರಪ್ಪ ವಿರುದ್ಧ ತನಿಖೆ ನಡೆಸಲು ಸುಪ್ರಿಂಕೋರ್ಟ್ ಆದೇಶ
ನವದೆಹಲಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ಕುರಿತಂತೆ ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಸೋಮವಾರ ಮಹತ್ವದ ತೀರ್ಪೊಂದರಲ್ಲಿ ಸುಪ್ರಿಂಕೋರ್ಟ್ ರದ್ದು ಪಡಿಸಿ, ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಕೆ.ಟಿ. ಥಾಮಸ್ ಹಾಗೂ ಆರ್.ಪಿ. ಸೇಥಿ ಅವರಿದ್ದ ಜಂಟಿ ನ್ಯಾಯಪೀಠ ಈ ತೀರ್ಪನ್ನು ನೀಡಿತು. ಬಂಗಾರಪ್ಪನವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಬಗೆಗೆ ಸಿಬಿಐ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಲ್ಲಿಸಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಪೀಠ, ಬಂಗಾರಪ್ಪನವರನ್ನು ಆರೋಪ ಮುಕ್ತಗೊಳಿಸಿದ ಹೈಕೋರ್ಟ್ನ ಏಕಪೀಠ ನ್ಯಾಯಾಧೀಶರ ತೀರ್ಪನ್ನು ಟೀಕಿಸಿತು.
ಭ್ರಷ್ಟಾಚಾರವನ್ನು ಬುಡ ಸಮೇತ ನಿರ್ಮೂಲಗೊಳಿಸಲು ದೇಶ ಕಂಕಣ ಬದ್ಧವಾಗಿರುವ ಸಂದರ್ಭದಲ್ಲಿ , ಹೈಕೋರ್ಟ್ನ ನ್ಯಾಯಾಧೀಶರು ಬಂಗಾರಪ್ಪನವರನ್ನು ವಿಚಾರಣೆಗೆ ಏಕೆ ಒಳಪಡಿಸುತ್ತಿಲ್ಲ ಎನ್ನುವುದೇ ಸ್ಪಷ್ಟವಾಗುತ್ತಿಲ್ಲ , ಸಿಬಿಐ ಆರೋಪಕ್ಕೆ ಅವರು ಯಾವ ರೀತಿ ವಿವರಣೆ ನೀಡುತ್ತಾರೆ ಎನ್ನುವುದನ್ನು ನ್ಯಾಯಮೂರ್ತಿಗಳು ಆಲಿಸಬೇಕಿತ್ತು ಎಂದು ನ್ಯಾಯಮೂರ್ತಿ ಥಾಮಸ್ ಹೇಳಿದರು.
ಬಂಗಾರಪ್ಪನವರು ವಿಚಾರಣೆಯನ್ನು ಎದುರಿಸಲೇಬೇಕು. ಸಿಬಿಐ ಮಾಡಿರುವ ಆರೋಪಗಳ ಬಗ್ಗೆ ಪ್ರತಿ ವಾದ ಮಂಡಿಸಲು ಅವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿತು.
(ಯುಎನ್ಐ)