ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ನಾವೂ ಸಿದ್ಧ - ಕರುಣಾನಿಧಿ
ಚೆನ್ನೈ : ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ತಮಿಳುನಾಡು ವಿಶೇಷ ಕಾರ್ಯಪಡೆ ಸನ್ನದ್ಧವಾಗಿದೆ ಎಂದು ಈವರೆಗೆ ಕಾರ್ಯಾಚರಣೆ ಕುರಿತು ಮೌನವಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಸೋಮವಾರ ಪ್ರಕಟಿಸಿದ್ದಾರೆ.
ಐಜಿ ಬಾಲಚಂದ್ರನ್ ನೇತೃತ್ವದಲ್ಲಿ ಕಾರ್ಯಪಡೆ ಸಿದ್ಧವಾಗಿದೆ. ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು. ಅಗತ್ಯ ಬಿದ್ದಲ್ಲಿ ಉಭಯ ರಾಜ್ಯಗಳು ಕೇಂದ್ರ ಸರ್ಕಾರದ ನೆರವನ್ನು ಕೋರುತ್ತವೆ ಎಂದರು.
ವಿಶೇಷ ಕಾರ್ಯಪಡೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಾರ್ಯಪಡೆಗೆ ಮತ್ತಷ್ಟು ಪೊಲೀಸ್ ಅಧಿಕಾರಿಗಳನ್ನು ಸೇರ್ಪಡೆಗೊಳಿಸಿ ಮೂಲ ದಳದ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಗೆ ಮುನ್ನ ಮುಖ್ಯ ಕಾರ್ಯದರ್ಶಿ ಎ.ಪಿ. ಮುತ್ತುಸ್ವಾಮಿ, ಗೃಹ ಕಾರ್ಯದರ್ಶಿ ಶಾಂತಾ ಶೀಲಾ ನಯ್ಯರ್, ಡಿಜಿಪಿ ಆರ್. ರಾಜಗೋಪಾಲನ್, ಎಡಿಜಿಪಿ ಎ.ಎಕ್ಸ್. ಅಲೆಕ್ಸಾಂಡರ್ ಮತ್ತು ಗುಪ್ತದಳದ ಐಜಿಪಿ ರಾಮಾನುಜಂ ಅವರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಕರುಣಾನಿಧಿ ಭಾಗವಹಿಸಿದ್ದರು.
ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ಕರ್ನಾಟಕದ ವಿಶೇಷ ಕಾರ್ಯಪಡೆ ಈಗಾಗಲೇ ಸಿದ್ಧವಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಭಾನುವಾರದ ಸುದ್ದಿಗೋಷ್ಠಿಯಲ್ಲಿ ನಾವು ಕಾರ್ಯಾಚರಣೆಗೆ ಸಿದ್ಧ . ಈ ಕುರಿತು ತಮಿಳುನಾಡು ಸರ್ಕಾರದ ಧೋರಣೆಯನ್ನು ಕಾದು ನೋಡುತ್ತಿದ್ದೇವೆ ಎಂದು ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಸಿ.ದಿನಕರ್ ಹೇಳಿದ್ದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ