ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯ ಸಂಭ್ರಮ
ಬೆಂಗಳೂರು : ಇಂದು ಕಡೇ ಕಾರ್ತೀಕ ಸೋಮವಾರ. ಬೆಂಗಳೂರಿನ ಬಸವನ ಗುಡಿಯಲ್ಲಿ ಈ ಸೋಮವಾರ ಕಡಲೆಕಾಯಿ ಪರಿಷೆಯಾಂದಿಗೆ ಬಹಳ ಮಹತ್ವ ಪಡೆದಿದೆ. ಬಸವನಗುಡಿ ರಸ್ತೆ ಕಡಲೆಕಾಯಿ ರಾಶಿಯಿಂದ ತುಂಬಿ ತುಳುಕುತ್ತಿದೆ.
ಪರಿಷೆ ನಡೆಯುವುದು ಸೋಮವಾರ ಹಾಗೂ ಮಂಗಳವಾರವೇ ಆದರೂ, ಶನಿವಾರದಿಂದಲೇ ಬಸವನಗುಡಿಯಲ್ಲಿ ಕಡಲೇಕಾಯಿ ಮಾರಾಟ ಭರದಿಂದ ಸಾಗಿದೆ. ಭಾನುವಾರವಂತೂ ರಸ್ತೆಯನ್ನೆಲ್ಲಾ ಕಡಲೇಕಾಯಿ ವ್ಯಾಪಾರಿಗಳೇ ಅಕ್ರಮಿಸಿಕೊಂಡಿದ್ದರು. ಪುರಿ, ಬತ್ತಾಸು, ಆಟಿಕೆಗಳು, ಬೆಲೂನ್ ಮಾರಾಟಗಾರರು, ಸಿಹಿ ತಿಂಡಿ ಮಿಠಾಯಿ ಮಾರಾಟಗಾರರೂ ರಸ್ತೆಯಂಚಿನಲ್ಲಿ ಟೆಂಟ್ ಹಾಕಿ ವ್ಯಾಪಾರಕ್ಕೆ ಸಕಲ ಸಿದ್ಧತೆ ನಡೆಸಿದ್ದಾರೆ.
ವ್ಯಾಪಾರಸ್ಥರಿಂದ, ಭಕ್ತಾದಿಗಳಿಂದ ಗಿಜಿಗುಡುತ್ತಿರುವ ಬಸವನಗುಡಿಗೆ ಹೊಸ ಕಳೆ ಬಂದಿದೆ. ಈ ಬಾರಿಯ ಜಾತ್ರೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಭಾಗವಹಿಸುತ್ತಿದ್ದಾರೆ ಎಂದೂ ದೇವಾಲಯದ ಪ್ರಕಟಣೆ ತಿಳಿಸಿದೆ. ಈ ಮಧ್ಯೆ ಪಕ್ಕದಲ್ಲೇ ಇರುವ ಹನುಮಂತನಗರದಲ್ಲಿ ನವೀಕೃತ ತಿಮ್ಮೇಶ್ ಪ್ರಭು ಉದ್ಯಾನದ ಉದ್ಘಾಟನೆಯೂ ಸೋಮವಾರವೇ ಜರುಗುತ್ತಿದೆ.
ಕಡಲೆ ಕಾಯಿ ಪರಿಷೆ ನೋಡಿ, ಕಡಲೇ ಕಾಯಿ ತಿನ್ನುತ್ತಾ ತಿಮ್ಮೇಶ ಪ್ರಭು ಉದ್ಯಾನಕ್ಕೆ ಹೋಗಿ, ನವೀಕರಣದ ಆನಂದ ಸವಿದು, ಸಂತಸದಿಂದ ಕಾಲ ಕಳೆಯಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...