ರಾಜ್ ಅಪಹರಣ : ಶ್ವೇತಪತ್ರಕ್ಕೆ ಜಯಾ ಆಗ್ರಹ
ಚೆನ್ನೈ : ಡಾ. ರಾಜ್ಕುಮಾರ್ ಅವರ ಅಪಹರಣ ಮತ್ತು ಬಿಡುಗಡೆ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಅಖಿಲ ಭಾರತ ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ಜೆ. ಜಯಲಲಿತಾ ಕರುಣಾನಿಧಿ ಸರಕಾರವನ್ನು ಸೋಮವಾರ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಜಯಲಲಿತಾ ವೀರಪ್ಪನ್ ಬಂಧಿಸುವಲ್ಲಿ ಎಸ್ಟಿಎಫ್ ವಿಫಲತೆ ಮತ್ತು ರಾಜ್ ಬಿಡುಗಡೆಯಲ್ಲಿ ನೆಡುಮಾರನ್ ಜೊತೆ ಡಾ. ಭಾನು ಪಾತ್ರ ಕುರಿತು ಸತ್ಯಾಂಶವನ್ನು ಬಹಿರಂಗಪಡಿಸದಿದ್ದರೆ ಸರಕಾರ ರಾಜೀನಾಮೆ ನೀಡಬೇಕೆಂದು ಜಯಾ ಆಗ್ರಹಿಸಿದ್ದಾರೆ.
ಅಪಹರಣದ ನಾಟಕದ ಹಿಂದಿನ ಸತ್ಯಾಂಶದ ಪೂರ್ಣಪಾಠವನ್ನು ಜನರ ಮುಂದಿಡುವ ಮೂಲಕ ತಮಿಳು ಮತ್ತು ಕನ್ನಡ ಜನರ ಮೇಲಿನ ಕಾಳಜಿಯನ್ನು ಸಾಬೀತುಪಡಿಸಬೇಕೆಂದು ರಾಜ್ ಅವರನ್ನು ಕೇಳಿಕೊಂಡಿರುವ ಜಯಲಲಿತಾ, ತಮಿಳುನಾಡು ಮತ್ತು ಕರ್ನಾಟಕದ ಜನತೆಯನ್ನು ಆತಂಕಕ್ಕೆ ತಳ್ಳಿದ ಅಪಹರಣ ಘಟನೆ ಕುರಿತು ಕೇಂದ್ರದ ದಿವ್ಯ ಮೌನವನ್ನು ಪ್ರಶ್ನಿಸಿದ್ದಾರೆ.
ಅಪಹರಣ ಪ್ರಕರಣದಲ್ಲಿ ಬಲವಾದ ಪಿತೂರಿ ಇದೆ. ಈ ಸಂಬಂಧ ನೀಡಿರುವ ಸರಣಿ ಒತ್ತೆ ಹಣದ ಬಗ್ಗೆ ವೀರಪ್ಪನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದ ಹೊರತು ಸತ್ಯ ಬಹಿರಂಗಗೊಳ್ಳುವುದಿಲ್ಲ. ಇದು ಸಾಧ್ಯವಾದರೆ ಎಲ್ಲರ ಬಣ್ಣ ಬಯಲಾಗಲಿದೆ ಎಂದಿರುವ ಜಯಾ, ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕರುಣಾನಿಧಿ ಸರಕಾರ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಪ್ರಶ್ನೆಗಳ ಸುರಿಮಳೆ : ಪ್ರೊ. ಕೃಷ್ಣಸ್ವಾಮಿ ಅವರು ಈ ಮುಂಚೆ ಕಾಡುಗಳ್ಳನಿಂದ ಅಪಹರಣಕ್ಕೊಳಗಾಗಿದ್ದರೂ, ರಾಜ್ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳು ವೀರಪ್ಪನ್ ಪಟ್ಟಿಯಲ್ಲಿದ್ದಾರೆ ಎಂದು ಕರ್ನಾಟಕ ಎಸ್ಟಿಎಫ್ನ ಎಸ್ಪಿ ಡಿ. ಅರಕೇಶ್ ವರದಿ ನೀಡಿದ ನಂತರವೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ ಎಂದು ಪ್ರಶ್ನೆಗಳ ಮಳೆ ಸುರಿಸಿರುವ ಜಯಾ, ಯಾರ ಜವಾಬ್ಧಾರಿ ಮೇಲೆ ನೆಡುಮಾರನ್ ಅವರನ್ನು ಸಂಧಾನಕ್ಕಾಗಿ ಕಳುಹಿಸಲಾಯಿತು? ಅವರಿಗೆ ರಾಜ್ಯಕಾರಗಳ ಅಧಿಕೃತ ಸಂಧಾನಕಾರನ ಸ್ಥಾನ ನೀಡಲಾಗಿತ್ತೆ ? ರಾಜ್ಯ ಸರಕಾರಗಳ ಅಧಿಕೃತ ಸಂಧಾನಕಾರರಾಗಿದ್ದ ಗೋಪಾಲ್ ಅವರ ತರುತ್ತಿದ್ದ ವಿಡಿಯೋ ಚಿತ್ರಗಳು ರಾಜ್ಯ ಸರಕಾರಕ್ಕೆ ಸೇರಬೇಕು ಆದರೆ ಅವನ್ನು ನಕ್ಕಿರನ್ ಪತ್ರಿಯಲ್ಲಿ ಲಾಂಛನದ ಸಮೇತ ಬಳಸಿಕೊಳ್ಳಲಾಗಿದೆ. ಹಾಗೆಯೇ ಕೊನೆಯ ಸಂಧಾನ ಯಾತ್ರೆಯಲ್ಲಿ ಗೋಪಾಲ್ ಅವರನ್ನು ಏಕೆ ಮೂಲೆಗುಂಪು ಮಾಡಲಾಯಿತು ಎಂಬುದನ್ನು ತಿಳಿಸಬೇಕು ಎಂದು ತಕರಾರು ತೆಗೆದಿದ್ದಾರೆ.
ಪತ್ರಕರ್ತ ಗೋಪಾಲ್ ವೀರಪ್ಪರನ್ಗೆ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಒಯ್ದು ಕೊಟ್ಟಿದ್ದಾರೆ ಎಂದು ಅರಕೇಶ್ ವರದಿಯಲ್ಲಿ ತಿಳಿಸದ್ದರೂ, ಅವರನ್ನೇ ಏಕೆ ಅಧಿಕೃತ ಸಂಧಾನಕಾರರನ್ನಾಗಿ ಮಾಡಲಾಯಿತು ಎಂದು ಜಯಾ ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ ದಮನ ಯತ್ನಕ್ಕೆ ಹಿನ್ನೆಡೆ : ರಾಜ್ ಅಪಹರಣ ಮತ್ತು ಬಿಡುಗಡೆ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಹತ್ತಿಕ್ಕಲು ನೆಡೆಯುತ್ತಿರುವ ಯತ್ನಗಳಿಗೆ ಹಿನ್ನೆಡೆ ಉಂಟು ಮಾಡಿದೆ ಎಂದು ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಮಣ್ಯಂ ಸ್ವಾಮಿ ಆಪಾದಿಸಿದ್ದಾರೆ.
ರಾಜ್ ಅವರನ್ನು ಬಿಡುಗಡೆ ಮಾಡುವಂತೆ ವೀರಪ್ಪನ್ಗೆ ಪತ್ರ ಬರೆಯಲು ಎಲ್ಟಿಟಿಈ ಮುಖಂಡ ಪ್ರಭಾಕರ್ ಅವರಿಗೆ 30 ಕೋಟಿ ಹಣ ನೀಡಲಾಗಿದೆ ಎಂದು ಆರೋಪಿಸಿರುವ ಸ್ವಾಮಿ, ಹಣವನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ಸಣ್ಣ ಹೊಟೇಲ್ ಒಂದರಲ್ಲಿ ಹಸ್ತಾಂತರಿಸಲಾಗಿದೆ. ಪ್ರಭಾಕರ್ ಅವರ ಮನವಿ ಪತ್ರವನ್ನು ದ್ರಾವಿಡಾರ್ ಕಳಗಮ್ನ ಕಾರ್ಯಕರ್ತ ಮಣಿ ಮತ್ತು ಬೆಂಗಳೂರಿನಲ್ಲಿ ಡಾಕ್ಟರ್ ಆಗಿರುವ ಮಲೇಷಿಯಾದ ತಮಿಳು ಮಹಿಳೆ ಕೊಂಡೊಯ್ದಿದ್ದಾರೆ. ಆದರೆ ಪತ್ರ ಬರೆಯುವಂತೆ ಪ್ರಭಾಕರನ್ ಅವರಿಗೆ ಯಾರು ಮನವಿ ಮಾಡಿದರು ಎಂಬುದು ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.
ಮುಖಪುಟ / ರಾಜ್ ಬಿಡುಗಡೆ