ರಾಜ್ ಬಿಡುಗಡೆ ಹೇಗಾಯಿತು? ವಿವರಣೆ ಕೋರಿ ಸುಪ್ರಿಂಕೋರ್ಟ್ಗೆ ಅರ್ಜಿ
ನವದೆಹಲಿ : ರಾಜ್ಕುಮಾರ್ ಬಿಡುಗಡೆ ಯಾವ ರೀತಿ ಆಯಿತು ಎಂಬುದಕ್ಕೆ ವಿವರಣೆಗಳನ್ನು ಒದಗಿಸುವಂತೆ ಕೋರಿ ವಕೀಲ ಬಿ.ಎಲ್.ವಧೇರ ಸುಪ್ರಿಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ ಬಿಡುಗಡೆಯಲ್ಲಿ ವೀರಪ್ಪನ್ ಜೊತೆ ಯಾವ ರೀತಿ ಸಂಧಾನ ನಡೆಸಲಾಯಿತು? ಯಾವ ಆಶ್ವಾಸನೆ/ಕಾರಣಕ್ಕೆ ಆತ ರಾಜ್ಕುಮಾರ್ ಅವರನ್ನು ಬಿಟ್ಟ ಎಂಬುದನ್ನು ಜನತೆಗೆ ಸ್ಪಷ್ಟವಾಗಿ ವಿವರಿಸಬೇಕು. ಇಂಥ ವಿಷಯದಲ್ಲಿ ಏನೊಂದನ್ನು ಮುಚ್ಚಿ ಹಾಕಿದರೂ ರಾಷ್ಟ್ರೀಯ ಭದ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಸಂವಿಧಾನದ 19 (1) (ಎ) ಪರಿಚ್ಛೇದದನ್ವಯ ಜನರಿಗೆ ಮಾಹಿತಿ ಪಡೆಯುವ ಹಕ್ಕಿದೆ ಎಂದು ವಧೇರ, ಕೇಂದ್ರ ಮಂತ್ರಿಮಂಡಲದ ಕಾರ್ಯದರ್ಶಿ ಮತ್ತು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಂಧಾನಕಾರ ಪಿ.ನೆಡುಮಾರನ್ ಆಡಿರುವ ಮಾತುಗಳು ‘ಕರ್ನಾಟಕದ ಮುಖ್ಯಮಂತ್ರಿಗಳು ನೆಡುಮಾರನ್ ಮೂಲಕ ವೀರಪ್ಪನ್ ಜೊತೆ ಏನೋ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ’ ಎಂಬುದನ್ನು ಸ್ಪಷ್ಟಪಡಿಸುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವೀರಪ್ಪನ್ ಹಾಗೂ ಆತನ ತಂಡವನ್ನು ಹಿಡಿಯಲು ತಕ್ಷಣವೇ ವೀರ್ಯವತ್ತಾದ ಹಾಗೂ ಪರಿಣಾಮಕಾರೀ ಕಾರ್ಯಾಚರಣೆಯನ್ನು ಕೈಗೊಳ್ಳಬೇಕು ಎಂದು ತಮಿಳುನಾಡು ಹಾಗೂ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ ಶುಕ್ರವಾರವೇ ವಧೇರ ಮತ್ತೊಂದು ಪತ್ರವನ್ನು ಕಳುಹಿಸಿದ್ದಾರೆ.
ವೀರಪ್ಪನ್ ಮತ್ತು ಆತನ 160 ಸಹಚರರ ಮೇಲಿನ ಟಾಡಾ ಮೊಕದ್ದಮೆಗಳನ್ನು ರದ್ದು ಪಡಿಸಿ ಮೈಸೂರು ವಿಶೇಷ ನ್ಯಾಯಾಲಯ ಆಗಸ್ಟ್ 19ರಂದು ಹೊರಡಿಸಿದ ತೀರ್ಪನ್ನೂ ವಧೇರ ಸುಪ್ರಿಂಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಸುಪ್ರಿಂಕೋರ್ಟ್ ಕೂಡ ವಧೇರ ಅರ್ಜಿಯನ್ನು ಬೆಂಬಲಿಸಿ ತೀರ್ಪು ನೀಡಿತ್ತು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ