ನ.22 ರಂದು ಮೈಸೂರಿನಲ್ಲಿ ಇಕ್ಫಾಸ್ಟ್- 2000
ಮೈಸೂರು : ಇಲ್ಲಿನ ಕಲಾಮಂದಿರದಲ್ಲಿ ನವಂಬರ್ 22 ರಂದು 14 ನೇ ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಮ್ಮೇಳನ ಇಕ್ಫಾಸ್ಟ್ - 2000 ಸಮ್ಮೇಳನ ನಡೆಯುವುದು.
ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು ಸೇರಿದಂತೆ ಸುಮಾರು 800 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. 21 ನೇ ಶತಮಾನಕ್ಕಾಗಿ ಆಹಾರ ಪ್ಯಾಕೇಜಿಂಗ್ನಲ್ಲಿನ ನೂತನ ಗತಿ ಹಾಗೂ ಆಯಾಮ ಅನ್ನುವ ವಿಷಯವನ್ನು ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಪ್ಯಾಕೇಜಿಂಗ್ಗೆ ಸಂಬಂಧಿಸಿದ ನೂತನ ತಂತ್ರಜ್ಞಾನಗಳು, ಪರಿಸರ ಸ್ನೇಹಿ ಪ್ಯಾಕೇಜಿಂಗ್, ಗುಣಮಟ್ಟ ಮತ್ತು ಮಾಹಿತಿ ವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಉಪನ್ಯಾಸಗಳಿರುತ್ತವೆ.
ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘ (ಎಎಫ್ಎಸ್ಟಿಐ) ಮತ್ತು ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯಗಳು ಜಂಟಿಯಾಗಿ ಸಮ್ಮೇಳನ ಏರ್ಪಡಿಸಿವೆ. ಕೇಂದ್ರ ಆಹಾರ ಸಂಸ್ಕರಣೋದ್ಯಮಗಳ ಇಲಾಖೆ ಹಾಗೂ ಕೃಷಿ ಮತ್ತು ಸಂಸ್ಕರಿತ ಆಹಾರೋತ್ಪನ್ನಗಳ ರಫ್ತು ಅಭಿವೃದ್ಧಿ ನಿಗಮ ಸಮ್ಮೇಳನಕ್ಕೆ ಸಹಕಾರ ನೀಡಿವೆ.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಮ್ಮೇಳನಕ್ಕೆ ಚಾಲನೆ ನೀಡುವರು. ಶಿಕ್ಷಣ ಸಚಿವ ಎಚ್. ವಿಶ್ವನಾಥ್, ಮೇಯರ್ ನಾರಾಯಣ ಹಾಗೂ ಸಿಎಫ್ಟಿಆರ್ಐ ನಿರ್ದೇಶಕ ಡಾ. ವಿ. ಪ್ರಕಾಶ್ ಸಮ್ಮೇಳನದಲ್ಲಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಫುಡ್ಎಕ್ಸ್ಪೋ- 2000 ಕಾರ್ಯಕ್ರಮ ಮತ್ತು ಪೋಸ್ಟರ್ ಪ್ರದರ್ಶನಗಳು ನಡೆಯುವವು.
(ಇನ್ಫೋ ವಾರ್ತೆ)