ಕೈಕೊಟ್ಟ ಓವರ್ಟೇಕ್ ಆಟ : 8 ಸಾವು, 34 ಜನ ಆಸ್ಪತ್ರೆಗೆ
ಶಿವಮೊಗ್ಗ : ಸಮೀಪದ ಆಯನೂರಿನಲ್ಲಿ ಖಾಸಗಿ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಮೃತಪಟ್ಟು, 34 ಜನ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮಲೆಶಂಕರದ ನಿವಾಸಿ ನಜೀರ್ಸಾಬ್, ಹಾರನಹಳ್ಳಿಯ ಸತ್ಯಪ್ಪ, ಅತಾವುಲ್ಲಾ, ಸೋಮಣ್ಣ ಹಾಗೂ ಕಮಲ ಎಂಬುವರ ಮಗಳು (ಹೆಸರು ತಿಳಿದಿಲ್ಲ), ಹೊಳೆ ಹೊನ್ನೂರಿನ ಹಾಲಪ್ಪ, ಬಸವರಾಜ ಹಾಗೂ ಗೋವಿಂದಪ್ಪ ಇವರೇ ಮೃತಪಟ್ಟ ನತದೃಷ್ಟರು. ಗಾಯಗೊಂಡಿರುವವ ಬಹುತೇಕರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಹಾಗೂ ನಂಜಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ಗಾಯಗೊಂಡಿರುವ ಒಬ್ಬನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಕ್ರೆಬೈಲಿನಿಂದ ಶಿವಮೊಗ್ಗ- ಆಯನೂರು- ಹಾರನಹಳ್ಳಿ ಮಾರ್ಗವಾಗಿ ಹೊನ್ನಾಳಿಗೆ ಹೋಗುತ್ತಿದ್ದ ಆಂಜನೇಯ ಎಂಬ ಖಾಸಗಿ ಬಸ್ಸು ಆಯನೂರಿಗೆ ಇನ್ನೊಂದು ಕಿ.ಮೀ. ದೂರವಿರುವಂತೆ ವಿಜಯಲಕ್ಷ್ಮಿ ಬಸ್ಸನ್ನು ಹಿಂದಿಕ್ಕುವ ಯತ್ನದಲ್ಲಿ ನಿಯಂತ್ರಣ ತಪ್ಪಿ ದ ಚಾಲಕ ತಬ್ಬಿಬ್ಬಾಗಿ ಬಸ್ಸು ಸೀದಾ ಮರಕ್ಕೆ ಹೊಡೆಯಿತು. ಬಸ್ಸಿನ ವೇಗ ಎಷ್ಟಿತ್ತೆಂದರೆ ಮರ ಬುಡ ಸಮೇತ ಉರುಳಿತು.
ಸಂಬಂಧಿಕರೊಬ್ಬರ ಶವ ಸಂಸ್ಕಾರಕ್ಕೆಂದು ಹೊರಟಿದ್ದ ಹೊಳೆ ಹೊನ್ನೂರಿನ ಹಾಲಪ್ಪ, ಬಸವರಾಜ ಹಾಗೂ ಗೋವಿಂದಪ್ಪ ಈ ಅಪಘಾತದಿಂದ ಶವವಾದರು. ಬಸ್ಸನ್ನು ಓಡಿಸುತ್ತಿದ್ದವ ಖಾಯಂ ಚಾಲಕನಲ್ಲ , ಆತನ ತಮ್ಮ ಎಂದು ತಿಳಿದು ಬಂದಿದೆ.
(ಇನ್ಫೋ ವಾರ್ತೆ)