ವೀರಪ್ಪನ್ ಕಾರ್ಯಾಚರಣೆಗೆ ರಾಜ್ಯ ಸಿದ್ಧವಾಗಿದೆ - ಎಸ್.ಎಂ.ಕೃಷ್ಣ
ನವದೆಹಲಿ : ವೀರಪ್ಪನ್ ಬಂಧನದ ಕಾರ್ಯಾಚಾರಣೆಯನ್ನು ಮತ್ತೆ ಆರಂಭಿಸಲು ವಿಶೇಷ ಕಾರ್ಯಾಚರಣೆ ಪಡೆ ಎಸ್ಟಿಎಫ್ಗೆ ಆದೇಶ ನೀಡಲಾಗಿದೆ ಎಂದು ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ವೀರಪ್ಪನ್ನನ್ನು ಹಿಡಿಯಲು ಪೊಲೀಸ್ ಇಲಾಖೆ, ಗುಪ್ತ ದಳ ವಿಭಾಗ , ಅರಣ್ಯ ಚೆಕ್ ಪೋಸ್ಟ್ ಎಲ್ಲವೂ ಸಿದ್ಧವಾಗಿದ್ದು, ಕೇಂದ್ರದ ನೆರವು ಪಡೆಯುವ ಬಗ್ಗೆ ವಿರೋಧ ಪಕ್ಷಗಳ ಜೊತೆಗೆ ಚರ್ಚಿಸಿ, ನಿರ್ಧಾರಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ಶುಕ್ರವಾರದ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ ಕುಮಾರ್ ಬಿಡುಗಡೆಯಾಗಿ ಎರಡು ದಿನಾವಾದರೂ ಕಾರ್ಯಾಚರಣೆ ಯಾಕೆ ಆರಂಭಿಸಿಲ್ಲ ಎಂಬ ಪ್ರಶ್ನೆಗೆ ಅವರು ವೀರಪ್ಪನ್, ರಾಜ್ ಅವರನ್ನು ಬಿಡುಗಡೆ ಮಾಡಿದ ನಂತರ ಕರ್ನಾಟಕದ ಅರಣ್ಯ ಪ್ರದೇಶದಲ್ಲಿಯೇ ಇದ್ದಾನೆ ಎಂದು ನಂಬುವುದು ಹೇಗೆ? ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿದ್ದರೆ ತಮಿಳು ನಾಡು ಸರಕಾರದ ಜೊತೆ ಸಮಾಲೋಚಿಸಿ ಜಂಟಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಕೇಂದ್ರ ವಾಣಿಜ್ಯ ಸಚಿವ ಮುರಸೋಳಿ ಮಾರನ್ ಅವರ ಆರೋಗ್ಯ ವಿಚಾರಿಸಲು ಶನಿವಾರದಂದು ತಾವು ಚೆನ್ನೈಗೆ ತೆರಳಲಿದ್ದು, ಇದೇ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಕರುಣಾ ನಿಧಿ ಅವರೊಂದಿಗೆ ವೀರಪ್ಪನ್ ಕಾರ್ಯಾಚರಣೆ ಕುರಿತು ಮಾತು ಕತೆ ನಡೆಸುವುದಾಗಿ ಅವರು ಉತ್ತರಿಸಿದರು.
ಬೆಂಗಳೂರಿನ ತಮಿಳರು ರಾಜ್ ಬಿಡುಗಡೆಗೆ ಪ್ರಯತ್ನಿಸಿರುವುದಾಗಲಿ, ವೈದ್ಯೆ ಭಾನು ಸಂಧಾನಕಾರರೊಂದಿಗೆ ವೀರಪ್ಪನ್ ಅಡಗುದಾಣಕ್ಕೆ ತೆರಳಿರುವ ಬಗ್ಗೆಯಾಗಲೀ ಸರಕಾರಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದ ಕೃಷ್ಣ ವೀರಪ್ಪನ್ ಕಾರ್ಯಾಚರಣೆ ಮತ್ತು ರಾಜ್ ಬಿಡುಗಡೆಯ ಕುರಿತು ವಿಧಾನ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲು ಅವಕಾಶ ಒದಗಿಸುವುದಾಗಿ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ