ಗ್ರಾನೈಟ್ ಅವ್ಯವಹಾರ - ವಂಚನೆ ಪ್ರಕರಣದಲ್ಲಿಡಾ. ಭಾನು ಹೆಸರು
ಬೆಂಗಳೂರು : ರಾಜ್ ಬಿಡುಗಡೆಯಲ್ಲಿ ಪ್ರಮುಖ ಪಾತ್ರಧಾರಿಣಿ ಎನ್ನಲಾದ ಡಾ. ಭಾನು ಹಿನ್ನೆಲೆ ಏನು? ಈಕೆ ವೈದ್ಯೆಯೇ, ವಾಣಿಜ್ಯೋದ್ಯಮಿಯೇ? ಈಕೆ ವೈದ್ಯೆಯೇ ಅಲ್ಲ ಕೇವಲ ನರ್ಸ್ ಎಂದೂ, ಇಲ್ಲ ಇಲ್ಲ ಈಕೆ ಆಯುರ್ವೇದ ಪದವೀಧರೆ ಎಂದೂ ಹೇಳಲಾಗುತ್ತಿದೆ. ಅದಕ್ಕಿಂತಲೂ ಮಿಗಿಲಾಗಿ ಈಕೆ ಅಪರಾಧದ ಹಿನ್ನೆಲೆ ಇರುವಾಕೆ ಎನ್ನುವ ಸತ್ಯಗಳೂ ಗರಿಬಿಚ್ಚಿಕೊಳ್ಳುತ್ತಿವೆ.
ಡಾ. ಭಾನು ಅವರ ಮೇಲೆ ಗ್ರಾನೈಟ್ ಅವ್ಯವಹಾರವೊಂದರಲ್ಲಿ ಸಿ.ಸಿ.ಬಿ ಪೊಲೀಸರು ಈ ಹಿಂದೆ ಮೊಕದ್ದಮೆ ದಾಖಲು ಮಾಡಿದ್ದಾರೆ ಎಂಬ ಸಂಗತಿಯೂ ಬೆಳಕುಕಂಡಿದೆ.
1998ರಲ್ಲಿ ಇಟಲಿ ಕಂಪನಿಯಾಂದರ ಜತೆ 40 ಸಾವಿರ ಡಾಲರ್ ಗ್ರಾನೈಟ್ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದ್ದ ಭಾನು, ಕಳಪೆ ಗುಣಮಟ್ಟದ ಗ್ರಾನೈಟ್ ಪೂರೈಕೆ ಮಾಡಿ ವಂಚಿಸಿದರೆಂಬ ಆರೋಪ ಹೊತ್ತಿದ್ದರು. ಈ ಸಂಬಂಧ ಕಂಪನಿಯವರು ಭಾನು ಅವರ ವಿರುದ್ಧ ಹೊಸತರಗುಪೇಟೆಯಲ್ಲಿರುವ ನಗರ ಅಪರಾಧ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಿದ್ದರು ಎಂಬ ಅಂಶವೂ ಹೊರಬಿದ್ದಿದೆ.
ಸಿ.ಸಿ.ಬಿ. ಪೊಲೀಸರು ಭಾರತೀಯ ದಂಡ ಸಂಹಿತೆಯ 420 ಹಾಗೂ 408ನ ಸೆಕ್ಷನ್ಗಳ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡಿದ್ದರು (ಸಂಖ್ಯೆ 113- 98) ತನಿಖೆಯನ್ನೂ ನಡೆಸಿದ್ದರು. ಭಾನು ಸಹವರ್ತಿಯಾಬ್ಬರನ್ನು ಬಂಧಿಸಿದ್ದರು. ಭಾನು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೂ ಹಾಜರಾಗಿದ್ದರು ಎಂದೂ ತಿಳಿದುಬಂದಿದೆ.
1999ರಲ್ಲಿ ಪೊಲೀಸರು ಈ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ವಿಚಾರಣೆ ನಡೆಯಬೇಕಿದೆ. ಭಾನು ಕೆ.ಜಿ.ಎಫ್ ನಿವಾಸಿ. ಮೂಲತಃ ತಮಿಳುನಾಡಿನ ತಿರುವಳ್ಳವರ್ ಜಿಲ್ಲೆಯವರು. ಈಕೆ ಹುಟ್ಟಿದ್ದು ಮಲೇಷಿಯಾದಲ್ಲಿ ಎಂಬ ವಿಷಯಗಳೂ ತಿಳಿದುಬಂದಿವೆ. ಆದರೆ, ಭಾನು ರಾಜ್ ಬಿಡುಗಡೆಗೆ ಕಾಡಿಗೆ ಹೇಗೆ ಹೋದರು ಎಂಬುದು ಇನ್ನೂ ನಿಗೂಢವಾಗಿದೆ.
ಸಂತಸ ತಂದಿತು ಸಂಕಟ : ರಾಜ್ಕುಮಾರ್ ತಾವು ಬಿಡುಗಡೆಯಾದ ಸಂತಸದಲ್ಲಿ, ಆ ಉದ್ವೇಗದಲ್ಲಿ ತಮ್ಮನ್ನು ಬಿಡುಗಡೆ ಮಾಡಿಸಿದ ವೈದ್ಯೆಗೆ ಧನ್ಯವಾದವನ್ನು ಅರ್ಪಿಸಲು (ಸಹಜವಾಗಿ ಹಾಗೂ ಎಂದಿನ ತಮ್ಮ ಮುಗ್ಧತೆಯಿಂದ ) ತಮಗರಿವಿಲ್ಲದೆ ಭಾನು ಹೆಸರು ಹೇಳೇ ಬಿಟ್ಟರು. ಇದಕ್ಕೂ ಮುನ್ನ ಯಾವುದೇ ಕಾರಣಕ್ಕೂ, ರಾಮಕುಮಾರ್, ಡಾ. ಭಾನು, ಪೆರಿಯಾರ್ ಗುಂಪಿನ ನಾಯಕ ಷಣ್ಮುಖ ಸುಂದರಂ, ಮಣಿ ಅವರ ಹೆಸರನ್ನು ಬಹಿರಂಗ ಪಡಿಸದಂತೆ ರಾಜ್ ಅವರಿಗೆ ತಿಳಿಸಲಾಗಿತ್ತು ಎನ್ನಲಾಗಿದೆ.
ರಾಜ್ ಅವರನ್ನು ಬಿಡಿಸಲು ಹೋಗಿ ತಾವೇ ಸಿಕ್ಕಿಕೊಂಡೆವಲ್ಲ ಎಂದು ಈಗ ವೈದ್ಯೆ ಪರಿತಪಿಸುತ್ತಿರಬೇಕು. ಈಗ ಎಲ್ಲ ಮಾಧ್ಯಮಗಳೂ ಭಾನು ಅವರ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಹೊಸ ಹೊಸ ಅಂಶಗಳು ಬೆಳಕು ಕಾಣುತ್ತಿವೆ. ಪೊಲೀಸರೂ ಈಗ ಕನ್ನಡ ನೆಲದಲ್ಲಿ ನಡೆಯುತ್ತಿರುವ ಎಲ್ಟಿಟಿಈ ಚಟುವಟಿಕೆಗಳ ಬಗ್ಗೆ ಗಂಭೀರವಾಗಿ ತನಿಖೆಗೆ ಮುಂದಾಗಿದ್ದಾರೆ. ಭಾನು, ಮಣಿ, ಷಣ್ಮುಖಂ ಹಾಗೂ ಇತರರ ಜಾತಕಗಳನ್ನು ಕೆದಕುತ್ತಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ