ಥಂಡಿಯ ಬೆಂಗಳೂರಲ್ಲಿ ಕ್ಯಾಮೆರಾ ಬೆಳಕಿನ ಬಿಸಿ
ನಾಡೋಜನ ನಡೆ- ನುಡಿಗಳ ಸೆರೆ. ಗಾಳಿಯ ತುಂಬೆಲ್ಲಾ ಜಯಕಾರದ ಪ್ರತಿಧ್ವನಿ, ದೇವಾಲಯದ ಘಂಟಾನಾದ, ಪಟಾಕಿಯ ಕಮಟು. ಈವತ್ತಿನ ಪರಿಸರ ಮಾಲಿನ್ಯಕ್ಕೆ ದೀವಳಿಗೆ ದಿನಕ್ಕಿರುವಷ್ಟೇ ರಿಯಾಯಿತಿ.
ಶುಷ್ಕ ವಾತಾವರಣದ ಇಬ್ಬನಿ ತಬ್ಬಿದ ಇಳೆಯಲಿ ಈವತ್ತು ರವಿತೇಜ ತೆರೆದ ಕಣ್ಣು ವರನಟನ ಪಾಲಿಗೆ ಹೊಸ ಅನುಭವ, ಮರುಹುಟ್ಟು ಪಡೆದಂಥ ಮುದ. ತಣ್ಣಗಿದ್ದ ಬೆಂಗಳೂರು ಬಿಸಿಯಾದರೂ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಆಗಾಗ ಮೋಡ ಸೂರ್ಯನ ಕಣ್ಣು ಮುಚ್ಚಿದರೂ ಮಳೆಯೇನೂ ಆಗಿಲ್ಲ. ಊಟಿ, ಕೊಡೈಕೆನಾಲ್ ಬಸ್ಸುಗಳು ಖಾಲಿ ಹೊಡೆಯುತ್ತಿವೆ.
ಮಳೆ ತೊಳೆದದ್ದೆಷ್ಟೆಂದು ಜಿಲ್ಲಾಧಿಕಾರಿಗಳು ಇನ್ನೂ ಲೆಕ್ಕ ಹಾಕುತ್ತಲೇ ಇದ್ದಾರೆ. ಎರಡು ಮೂರು ತಿಂಗಳುಗಳಿಂದ ಸದ್ದು ಮಾಡದ ನೀರೆತ್ತುವ ಪಂಪುಗಳು ತೆಂಗಿನತೋಟಗಳಲ್ಲಿ ಈಗ ಭರ್ರೆನ್ನುತ್ತಿವೆ. ಬೆಂಗಳೂರಿನಲ್ಲಿ ಕಿತ್ತು ಹೋಗಿರುವ ರಸ್ತೆಗಳು ಇನ್ನೂ ಗತಿ ಕಂಡಿಲ್ಲ.
ಬುಧವಾರಕ್ಕಿಂತ ಗುರುವಾರದ ಹವೆಯಲ್ಲಿ ಹೊಸದೇನೂ ಇಲ್ಲ. ಗದಗದಲ್ಲಿ ಅತಿ ಕನಿಷ್ಠ ತಾಪಮಾನ 15 ಡಿಗ್ರಿ ದಾಖಲಾಗಿದೆ. ಸ್ವಲ್ಪ ಮೋಡವಾಗುವ ಲಕ್ಷಣಗಳಿವೆ ಅನ್ನೋದನ್ನ ಬಿಟ್ಟರೆ ಮಳೆ ಹುಯ್ಯುವ ಸೂಚನೆಗಳೇನೂ ಇಲ್ಲ ಎಂದು ಹವಾಮಾನ ಇಲಾಖೆ ತನ್ನ ಪಾಠ ಒಪ್ಪಿಸಿದೆ.
ಚರ್ಮವನ್ನು ಕೊಯ್ಯುವ ಮಂಜಿನ ತೆರೆ ನಾಡಿನಾದ್ಯಂತ ಗಾಳಿಯಲ್ಲಿ ಹಾರುತ್ತಿರುವ ಅಣ್ಣಾವ್ರ ಬ್ಯಾನರುಗಳಿಗೆ ಮುತ್ತು ಪೋಣಿಸುತ್ತಿದೆ. ಮನೆ, ಕಚೇರಿ, ಪಬ್ಬು, ಬಾರು, ರೋಡು, ಕೊನೆಗೆ ಗಾಳಿ ಎಲ್ಲೆಡೆಯೂ ಕೇಳುತ್ತಿರುವುದು ಒಂದೇ ಹೆಸರು- ಡಾ.ರಾಜ್ಕುಮಾರ್.