ವಿಶೇಷ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿನತ್ತ ಹೊರಟ ಡಾ. ರಾಜ್
ಈರೋಡ್: 109 ದಿನಗಳ ಸುದೀರ್ಘ ವನವಾಸದ ನಂತರ ಬಿಡುಗಡೆಗೊಂಡು ಕನ್ನಡ ಮಣ್ಣನ್ನು ಮುಟ್ಟಲು ತವಕಿಸುತ್ತಿದ್ದ ಕನ್ನಡದ ವರನಟ ಡಾ. ರಾಜ್ಕುಮಾರ್ ಗುರುವಾರ ಮಧ್ಯಾಹ್ನ ಕರ್ನಾಟಕ ಸರ್ಕಾರದ ವಿಶೇಷ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಸಿಂಗಮ್ಪೆಟ್ಟೈ ಗ್ರಾಮಸ್ಥರ ಅಭೂತಪೂರ್ವ ಬೀಳ್ಕೊಡುಗೆಯ ನಂತರ ರಾಜ್ಕುಮಾರ್ ಅವರು, ಪತ್ನಿ, ಪುತ್ರರು, ಸೋದರಿ ಹಾಗೂ ತಮ್ಮೊಂದಿಗೆ 109 ದಿನ ಕಾಡಿನಲ್ಲಿ ಕಳೆದ ನಾಗೇಶ್ ಜತೆಯಲ್ಲಿ ಎರಡು ಹೆಲಿಕಾಪ್ಟರ್ಗಳಲ್ಲಿ ಬೆಂಗಳೂರಿನತ್ತ ಈಗ ತೆರಳಿದ್ದಾರೆ.
ಸಿಂಗಪೆಟ್ಟೈ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಬೀಡು ಬಿಟ್ಟಿದ್ದ ಎರಡು ಹೆಲಿಕಾಪ್ಟರ್ಗಳ ಪೈಕಿ ಒಂದರಲ್ಲಿ ರಾಜ್ಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಮತ್ತೊಂದರಲ್ಲಿ ಉಳಿದವರು ಬೆಂಗಳೂರಿನತ್ತ ಹೊರಟರು.
ಬೆಂಗಳೂರು ವರದಿ : ಈಗಾಗಲೇ ಈರೋಡ್ ಬಿಟ್ಟಿರುವ ಡಾ. ರಾಜ್ಕುಮಾರ್ ಅವರು, ಜಕ್ಕೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿ ಅವರನ್ನು ಖ್ಯಾತ ಚಿತ್ರನಟ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಹಾಗೂ ಉನ್ನತಾಧಿಕಾರಿಗಳು ಸ್ವಾಗತಿಸಲಿದ್ದಾರೆ.
ಜಕ್ಕೂರು ವಿಮಾನ ನಿಲ್ದಾಣದಿಂದ ರಾಜ್ಕುಮಾರ್ ಅವರು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಬಳಿಕ, ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ