ರಾಜ್ ಕರೆತರಲು ಕೊಯಮತ್ತೂರಿಗೆ ಹೋದ ಖಾಸಗಿ ವಿಮಾನ
ಬೆಂಗಳೂರು : ಬಿಡುಗಡೆಯ ನಂತರ ಕೊಯಮತ್ತೂರು ಬಳಿ ಚಿಕಿತ್ಸೆ ಪಡೆಯುತ್ತಿರುವ ವರನಟ ಡಾ.ರಾಜ್ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲು ಖಾಸಗಿ ವಿಮಾನವೊಂದು ಕೊಯಮತ್ತೂರಿಗೆ ತೆರಳಿದೆ. ಗುರುವಾರ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಡಾ. ರಾಜ್ಕುಮಾರ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಈ ಮುನ್ನ ಡಾ. ರಾಜ್ ಅವರನ್ನು ಸರಕಾರದ ಹೆಲಿಕಾಪ್ಟರ್ನಲ್ಲಿ ಕರೆತರಲಾಗುವುದು ಎಂದು ಹೇಳಲಾಗಿತ್ತು. 109 ದಿನಗಳ ಅರಣ್ಯ ವಾಸದಿಂದ ಬಳಲಿರುವ ಡಾ. ರಾಜ್ಕುಮಾರ್ ಆರೋಗ್ಯವಾಗಿದ್ದು, ಅವರೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಔಷಧೋಪಚಾರವೂ ನಡೆಯುತ್ತಿದೆ. ರಾಜ್ ಅವರಿಗೆ ಸಂಪೂರ್ಣ ಪೊಲೀಸ್ ರಕ್ಷಣೆ ನೀಡಲಾಗಿದೆ. ಆದರೆ, ರಾಜ್ಕುಮಾರ್ ಅವರು ಎಲ್ಲಿದ್ದಾರೆ ಎಂಬುದು ಮಾತ್ರ ತಿಳಿದುಬಂದಿಲ್ಲ. ರಾಜ್ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆದಿದೆ.
ಈ ಮಧ್ಯೆ ಬೆಂಗಳೂರಿನಲ್ಲಿ ರಾಜ್ ಆಗಮನದ ಸಂತಸ ಮುಗಿಲು ಮುಟ್ಟಿದೆ. ವಿಜಯೋತ್ಸಾಹ ವಿಜೃಂಭಿಸುತ್ತಿದೆ. ನಗರದ ಹಲವಾರು ಕನ್ನಡ ಸಂಘ ಸಂಸ್ಥೆಗಳು, ತಮ್ಮ ಬಡಾವಣೆಗಳಲ್ಲಿ ಕನ್ನಡ ಬಾವುಟವನ್ನು ಕಟ್ಟಿ, ತಳಿರು ತೋರಣಗಳಿಂದ ಅಲಂಕರಿಸಿವೆ. ಧ್ವನಿವರ್ಧಕಗಳಲ್ಲಿ ಡಾ. ರಾಜ್ಕುಮಾರ್ ಹಾಡಿರುವ ಗೀತೆಗಳು ಮೊಳಗುತ್ತಿವೆ. ಬುಧವಾರ ಕನ್ನಡದ ಎಲ್ಲ ಟಿ.ವಿ. ಚಾನೆಲ್ಗಳೂ ಡಾ. ರಾಜ್ಕುಮಾರ್ ಅಭಿನಯದ ಚಲನಚಿತ್ರಗಳನ್ನು ಪ್ರಸಾರ ಮಾಡಿದವು. ಗುರುವಾರವೂ ಟಿ.ವಿ. ಚಾನೆಲ್ಗಳು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ.
ಫಲಕಗಳು: ರಾಜಾ ನಮ್ಮ ರಾಜಾ, ಅಣ್ಣಾವ್ರು ನಾಡಿಗೆ ಬಂದರು, ಕರ್ನಾಟಕ ರತ್ನನನ್ನು ಕನ್ನಡ ತಾಯಿ ಕಾಪಾಡಿದಳು, ನಮ್ಮೆಲ್ಲರ ರಾಜಣ್ಣ ನೂರ್ಕಾಲ ಬಾಳಲಿ , ರಾಜ್ಕುಮಾರ್ಗೆ ಜೈ ಎಂಬಿತ್ಯಾದಿ ಫಲಕಗಳು ರಾರಾಜಿಸುತ್ತಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸದಾಶಿವ ನಗರದ ಡಾ. ರಾಜ್ಕುಮಾರ್ ಅವರ ನಿವಾಸದ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.
ರಾಜ್ಕುಮಾರ್ ವಿಶೇಷ ವಿಮಾನದಲ್ಲಿ ಬರುತ್ತಾರೆ ಎಂಬ ಸುದ್ದಿ ಟಿ.ವಿ. ನ್ಯೂಸ್ನಲ್ಲಿ ಪ್ರಸಾರವಾಗುತ್ತಿದ್ದಂತೆಯೇ ನೂರಾರು ರಾಜ್ ಅಭಿಮಾನಿಗಳು ಬೆಂಗಳೂರು ವಿಮಾನ ನಿಲ್ದಾಣದತ್ತ ಹೊರಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಹೋಮ - ಹವನ : ರಾಜ್ ಅಪಹರಣವಾದ ದಿನದಿಂದಲೂ ಸಾವಿರಾರು ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ಹೋಮ, ಹವನ ನಡೆಸಿದ್ದರು. ಉರುಳು ಸೇವೆಯೂ ನಡೆದಿತ್ತು. ರಾಜ್ ಬಿಡುಗಡೆಯ ನಂತರವೂ ಚಿತ್ರನಟರು, ಅಭಿಮಾನಿಗಳು ದೇವರನ್ನು ಮರೆತಿಲ್ಲ. ಬುಧವಾರ ರಾಜ್ಯದ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಇಂದು (ಗುರುವಾರ) ರೆಬೆಲ್ ಸ್ಟಾರ್ ಅಂಬರೀಶ್ ತಮ್ಮ ಮನೆಯಲ್ಲಿ ಹೋಮ ಮಾಡುತ್ತಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ