ಗಾಜನೂರಲ್ಲಿ ರಾಜ್ ವಿಶ್ರಾಂತಿ, ಗುರುವಾರ ಬೆಳಗ್ಗೆ ಬೆಂಗಳೂರಿಗೆ
ಬೆಂಗಳೂರು : ವೀರಪ್ಪನ್ ಒತ್ತೆಯಲ್ಲಿದ್ದ ರಾಜ್ಕುಮಾರ್ ಹಾಗೂ ನಾಗೇಶ್ ಅವರ ಬಿಡುಗಡೆಯಾಗಿದ್ದು, ಗುರುವಾರ ಮುಂಜಾನೆ ಹೊತ್ತಿಗೆ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ದೊಡ್ಡಗಾಜನೂರಿನಲ್ಲಿ ಕೆಲವು ತಾಸುಗಳ ಕಾಲ ವಿರಮಿಸಿ, ಗುರುವಾರ ಮುಂಜಾನೆ ಹೊತ್ತಿಗೆ ಅವರು ಬೆಂಗಳೂರಿಗೆ ಬರಲಿದ್ದಾರೆ. ಅವರು ಬಂದ ನಂತರ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಹೇಳಿದರು.
ರಾಜ್ರ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನೂ ನಡೆಸಲಾಗಿದ್ದು, ಈ ಕುರಿತು ರಾಜ್ ಕುಟುಂಬದೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಕೃಷ್ಣ ಹೇಳಿದರು. ರಾಜ್ ಅಪಹರಣವಾದಾಗಿನಿಂದ ಈ ಹೊತ್ತಿನವರೆಗೆ ರಾಜ್ಯದಲ್ಲಿ ಶಾಂತಿ ಕಾಪಾಡಿಕೊಂಡು ಬಂದ ಜನತೆಗೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದ್ದು, ರಾಜ್ ಅವರು ಬೆಂಗಳೂರಿಗೆ ಬಂದ ನಂತರವೂ ಇದೇ ರೀತಿ ಶಾಂತಿ ಕದಡದಂತೆ ವರ್ತಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ದೇಶಕ್ಕೇ ಮಾದರಿ : ರಾಜ್ ಅಪಹರಣವಾದ ದಿನದಿಂದಲೂ ರಾಜ್ಯ ಸರ್ಕಾರದೊಂದಿಗೆ ಎಲ್ಲಾ ಹಂತದಲ್ಲೂ ಸಹಕರಿಸಿ, ಸಲಹೆ ಸೂಚನೆಗಳನ್ನು ನೀಡಿದ ಪ್ರತಿಪಕ್ಷದ ನಾಯಕರ ನಡವಳಿಕೆ ದೇಶಕ್ಕೇ ಮಾದರಿಯಾಗಿದೆ ಎಂದು ಕೃಷ್ಣ ಸದನದಲ್ಲಿ ಧನ್ಯವಾದ ಅರ್ಪಿಸಿದರು. ಪ್ರತಿಪಕ್ಷಗಳ ಪರವಾಗಿ ಪಿ.ಜಿ.ಆರ್. ಸಿಂಧ್ಯಾ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸಿದರು. ವಿಧಾನಪರಿಷತ್ತಿನಲ್ಲಿ ರಾಜ್ ಬಿಡುಗಡೆ ವಿಷಯವನ್ನು ಅಧಿಕೃತವಾಗಿ ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಕಟಿಸಿದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ