ಐಟಿ ಅಭಿವೃದ್ಧಿಗೆ ವಿಶ್ವಬ್ಯಾಂಕ್ನ 2 ಬಿಲಿಯನ್ ಡಾಲರ್ ನೆರವು
* ದೀಪಾಕ್ಷಿ ಘೋಷ್
ನವದೆಹಲಿ : ಭಾರತದಲ್ಲಿನ ಮಾಹಿತಿ ತಂತ್ರಜ್ಞರ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಿಷ್ಟ ಕಾರ್ಯಕ್ರಮಕ್ಕಾಗಿ 2 ಬಿಲಿಯನ್ ಡಾಲರ್ಗಳ ಹಣಕಾಸು ನೆರವು ನೀಡುವುದಾಗಿ ವಿಶ್ವಬ್ಯಾಂಕ್ ಭರವಸೆ ನೀಡಿದೆ.
ಈಗ ಭಾರತದಲ್ಲಿ ಪ್ರವಾಸದಲ್ಲಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಜೇಮ್ಸ್ ವೂಲ್ಫೆನ್ಸನ್ ಅವರನ್ನು ಈ ಸಂಬಂಧ ಸೋಮವಾರ ಭೇಟಿ ಮಾಡಿದ್ದ ಮಾಹಿತಿ ತಂತ್ರಜ್ಞಾನದ ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರಿಗೆ ವಿಶ್ವಬ್ಯಾಂಕ್ನ ಹಣಕಾಸು ನೆರವು ನೀಡುವ ಭರವಸೆ ನೀಡಲಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಸಂಪರ್ಕ ಕೇಂದ್ರಗಳನ್ನು ತೆರೆಯಲು ನೆರವು ನೀಡಲು ಹಾಗೂ ಮುಂದಿನ ದಿನಗಳಲ್ಲಿ ಸಂಪರ್ಕ ಕೇಂದ್ರಗಳನ್ನು ದೇಶದ ಬೇರೆ ಭಾಗಗಳಿಗೆ ವಿಸ್ತರಿಸಲು ಸಹಾಯ ಮಾಡಲಾಗುವುದು ಎಂದು ಜೇಮ್ಸ್ ವೂಲ್ಫೆನ್ಸನ್ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ತ್ರಿಗುಣ : ಜೇಮ್ಸ್ ವೂಲ್ಫೆನ್ಸನ್ ಅವರ ಜತೆ ಒಂದು ಗಂಟೆ ನಡೆದ ಮಾತುಕತೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ಪ್ರಮೋದ್ ಮಹಾಜನ್ ಅವರು, ಈ ಸಹಾಯದಿಂದ 300 ಮಿಲಿಯನ್ ಡಾಲರ್ಗಳ ಯೋಜನೆಯಾಂದಿಗೆ ಮುಂದಿನ ಮೂರು ವರ್ಷಗಳಲ್ಲಿ 250 ಶಿಕ್ಷಣ ಸಂಸ್ಥೆಗಳನ್ನು ಉನ್ನತ ದರ್ಜೆಗೇರಿಸುವುದಾಗಿ ತಿಳಿಸಿದ್ದಾರೆ.
ತಂತ್ರಜ್ಞರ ಸಂಖ್ಯೆ ಹೆಚ್ಚಿಸಬೇಕಾದರೆ ಅಗತ್ಯ ಗ್ರಂಥಾಲಯ ಮತ್ತು ತಾಂತ್ರಿಕ ಪ್ರಯೋಗಾಲಯಗಳನ್ನು ಉನ್ನತ ದರ್ಜೆಗೇರಿಸುವುದು ಅನಿವಾರ್ಯವಾಗಿದ್ದು, ಇದರಿಂದ ವಿದ್ಯಾರ್ಥಿಗಳ ಸಂಖ್ಯೆಯನ್ನು ಮೊದಲ ವರ್ಷದಲ್ಲಿ ದ್ವಿಗುಣಗೊಳಿಸಿ ಮುಂದಿನ ವರ್ಷದಲ್ಲಿ ತ್ರಿಗುಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿ 6 ತಂತ್ರಜ್ಞಾನ ಸಂಸ್ಥೆಗಳಿದ್ದು, 17 ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜುಗಳು ಮತ್ತು 750 ಇತರೆ ತಾಂತ್ರಿಕ ಶಿಕ್ಷಣ ಕಾಲೇಜುಗಳು ಇವೆ. ಇವುಗಳಿಂದ 2 ಲಕ್ಷ ಎಂಜಿನಿಯರಿಂಗ್ ಪದವೀಧರರು ಮತ್ತು ಒಂದು ಲಕ್ಷ ಮಾಹಿತಿ ತಂತ್ರಜ್ಢಾನ ಪದವೀಧರರು ಪ್ರತಿ ವರ್ಷ ಹೊರಬರುತ್ತಿದ್ದಾರೆ.
ಈ ಮುಂಚೆ 1991-1997ರಲ್ಲಿ ವಿಶ್ವಬ್ಯಾಂಕ್, 14 ಎಂಜಿನಿಯರಿಂಗ್ ಮತ್ತು ಇತರ 12 ಶಿಕ್ಷಣ ಸಂಸ್ಥೆಗಳನ್ನು ಉನ್ನತ ದರ್ಜೆಗೇರಿಸಲು 8 ಮಿಲಿಯನ್ ಡಾಲರ್ ನೆರವು ನೀಡಿತ್ತು . ಇದರ ಜೊತೆಗೆ ಸ್ವಿಸ್ ಅಭಿವೃದ್ಧಿ ಸಂಸ್ಥೆಯು 25 ಮಿಲಿಯನ್ ಸ್ವಿಸ್ ಪ್ರಾನ್ಸಿಸ್ ಹಣ ನೀಡಿತ್ತು. ಮಾಹಿತಿ ತಂತ್ರಜ್ಞಾನದ ಮೂಲಕ ಬಡತನ ನಿರ್ಮೂಲನೆ ಉದ್ದೇಶ ಹೊಂದಿರುವ ಭಾರತ ಸರಕಾರದ ಉದ್ದೇಶಕ್ಕೆ ವಿಶ್ವಬ್ಯಾಂಕ್ ಅಧ್ಯಕ್ಷರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆಂದು ಮಹಾಜನ್ ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳ ಅಭಿವೃದ್ಧಿ : ವಿಶ್ವಬ್ಯಾಂಕ್ನ ಈ ಹಣಕಾಸು ನೆರವಿನಿಂದ ಅಭಿವೃದ್ಧಿ ಕುಂಠಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ, ವನಾಂಚಲ್ ಮತ್ತು ಛತ್ತೀಸ್ಘಡ್ ಹಾಗೂ ಒರಿಸ್ಸಾ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂಟರ್ನೆಟ್ ಸಂಪರ್ಕ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕಾಗಿ 100 ಮಿಲಿಯನ್ ಡಾಲರ್ ಹಣ ವಿನಿಯೋಗಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಭಾರತಕ್ಕೆ 9 ದಿನಗಳ ಭೇಟಿಗಾಗಿ ಸೋಮವಾರ ದೆಹಲಿಗೆ ಬಂದಿರುವ ಜೇಮ್ಸ್ ವೂಲ್ಫೆನ್ಸನ್ ಅವರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ವಿದ್ಯುತ್ ಸಚಿವ ಸರೇಶ್ ಪ್ರಭು, ಹಣಕಾಸು ಸಚಿವ ಯಶವಂತ ಸಿನ್ಹಾ, ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್ ಅವರ ಜೊತೆ ಚರ್ಚೆ ನಡೆಸಲಿದ್ದಾರೆ.
(ಐಎಎನ್ಎಸ್)