ಸಾರಾಯಿ ವಿರುದ್ಧ ಬೀದರ್ ಜಿಲ್ಲೆಯ ಮಹಿಳೆಯರ ಪ್ರತಿಭಟನೆ
ಬೀದರ್ : ಪಾನ ನಿರೋಧದ ಕೂಗು ಇಂದು ನಿನ್ನೆಯದೇನಲ್ಲ. ದೇಶಾದ್ಯಂತ ಸಾರಾಯಿ ವಿರುದ್ಧ ನಾನಾ ಬಗೆಯ ಹೋರಾಟಗಳು ನಡೆದಿವೆ. ಕೆಲವು ರಾಜ್ಯ ಸರಕಾರಗಳು ಜನರ ಪ್ರತಿಭಟನೆಗೆ ಹೆದರಿ ಪಾನ ನಿರೋಧ ಜಾರಿಗೆ ತಂದರೂ, ರಾಜ್ಯದ ಬೊಕ್ಕಸಕ್ಕೆ ಭಾರಿ ಆದಾಯ ತರುವ ಸಾರಾಯಿ ಮಾರಾಟ ನಿಲ್ಲಿಸಲಾಗದೆ ಸೋತಿವೆ.
ಆಂಧ್ರಪ್ರದೇಶದಲ್ಲಿ ಸಾರಾಯಿ ವಿರುದ್ಧ ಭಾರಿ ಹೋರಾಟವೇ ನಡೆದಿತ್ತು. ಈಗ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಸಸ್ತಾಪುರ ಗ್ರಾಮದ ಮಹಿಳೆಯರು ಕುಡಿದು ಮನೆಗೆ ಬರುವ ತಮ್ಮ ಪತಿ ದೇವರ ವಿರುದ್ಧ ಹೋರಾಟ ಮಾಡಲಾರದೇ, ಸಾರಾಯಿ ವಿರುದ್ಧವೇ ಸಮರ ಸಾರಿದ್ದಾರೆ.
ಸೋಮವಾರ ಮಹಿಳೆಯರ ಗುಂಪೊಂದು ತಮ್ಮೂರಿಗೆ ಸಾರಾಯಿ ಹೊತ್ತು ತರುವ ಜೀಪ್ ಅನ್ನು ತಡೆದು, ಜೀಪ್ ಮೇಲೆ ದಾಳಿ ಮಾಡಿ, ಅದರಲ್ಲಿದ್ದ ನೂರಾರು ಪ್ಯಾಕೆಟ್ ಸಾರಾಯಿಯನ್ನು ಹೊರಗೆಸೆದು ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಸಾರಾಯಿಯ ಅಧಿಕೃತ ಗುತ್ತಿಗೆದಾರರೊಬ್ಬರಿಗೆ ಸೇರಿದ ಈ ಜೀಪ್ ಪ್ರತಿ ನಿತ್ಯ ಗ್ರಾಮಕ್ಕೆ ಸಾರಾಯಿ ಸರಬರಾಜು ಮಾಡುತ್ತಿತ್ತು. ತಮ್ಮೂರಿಗೆ ಸಾರಾಯಿ ಬಂದರೆ ತಾನೇ ತಮ್ಮ ಗಂಡಂದಿರು ಕುಡಿಯುವುದು ಎಂದು ಈ ವೀರ ಮಹಿಳೆಯರು ಸಾರಾಯಿ ಪ್ಯಾಕೆಟ್ಗಳಿಗೇ ಬೆಂಕಿ ಹಚ್ಚಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ದಾಳಿಯ ಬಗ್ಗೆ ಜೀಪ್ನಲ್ಲಿದ್ದ ಕ್ಯಾಷಿಯರ್ ಬಸವಕಲ್ಯಾಣ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.