ಸಕ್ಕರೆ ಕಾಯಿಲೆ ಮಕ್ಕಳಿಗೆ ಪ್ರವೇಶ ನಿರಾಕರಣೆ: ರಾಜ್ಯಪಾಲರ ವಿಷಾದ
ಬೆಂಗಳೂರು : ಸಕ್ಕರೆ ಖಾಯಿಲೆಯಿಂದ ನರಳುತ್ತಿರುವ ಮಕ್ಕಳಿಗೆ ಕೆಲವು ಶಾಲೆಗಳು ಪ್ರವೇಶಾವಾಕಾಶ ನೀಡಲು ಹಿಂಜರಿಯುತ್ತಿರುವ ಧೋರಣೆ ಬಗೆಗೆ ರಾಜ್ಯಪಾಲೆ ವಿ.ಎಸ್. ರಮಾದೇವಿ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಶ್ವ ಮಧುಮೇಹ ದಿನದ ಅಂಗವಾಗಿ ನಗರದಲ್ಲಿ ಮಂಗಳವಾರ ನಡೆದ ಸಾಂಕೇತಿಕ ಓಟಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಕಾಯಿಲೆ ಕಾರಣದಿಂದ ಶಿಕ್ಷಣ ನೀಡಲು ನಿರಾಕರಿಸುತ್ತಿರುವ ಶಾಲೆಗಳನ್ನು ಟೀಕಿಸಿದರು. ಮಕ್ಕಳಲ್ಲಿ ಕೀಳರಿಮೆ ಮೂಡಿಸುವ ಈ ಧೋರಣೆಯನ್ನು ಕೈ ಬಿಡಬೇಕು ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಪ್ರವೇಶ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ಸಾಮಾಜಿಕ ಮತ್ತು ಆರ್ಥಿಕ ಪರಿಸರದ ಮೇಲೆ ಪರಿಣಾಮ ಬೀರುವ ಮಧುಮೇಹದ ಹತೋಟಿಗೆ ಅರಿವು ಮೂಡಿಸುವಲ್ಲಿ, ಶಿಕ್ಷಣ ಸಂಸ್ಥೆಗಳು ಮತ್ತು ಔಷಧ ಸಂಸ್ಥೆಗಳು ಮುಂದಾಗುವಂತೆ ರಮಾದೇವಿ ಕರೆ ನೀಡಿದರು. ವೈದ್ಯರು, ಪೌಷ್ಟಿಕ ತಜ್ಞರು, ಕ್ರೀಡಾಪಟುಗಳು, ನಗರಪಾಲಿಕೆ ಸದಸ್ಯರು ಮತ್ತು ಸಾರ್ವಜನಿಕರು ಸೇರಿದಂತೆ ಸುಮಾರು 500 ಮಂದಿ ಓಟದಲ್ಲಿ ಪಾಲ್ಗೊಂಡಿದ್ದರು.
ಒಂದು ಕಿಲೋಮೀಟರ್ ದೂರವನ್ನು ಕ್ರಮಿಸಿ ವಿಧಾನಸೌಧದ ಮುಂದಕ್ಕೆ ಬಂದ ಗುಂಪನ್ನು ಆರೋಗ್ಯ ಸಚಿವ ಮಲಕರೆಡ್ಡಿ ಬರಮಾಡಿಕೊಂಡರು. ವಾಸಿಯಾಗದ ಮಧುಮೇಹವನ್ನು ಹತೋಟಿಯಲ್ಲಿಡಲು ಮಧುಮೇಹಿಗಳು ಎಚ್ಚರಿಕೆ ವಹಿಸಬೇಕೆಂದು ಸಚಿವರು ಹೇಳಿದರು.
(ಯುಎನ್ಐ)