ರಾಣೆಬೆನ್ನೂರು ಮತ್ತೆ ಉದ್ರಿಕ್ತ , ಅಶ್ರುವಾಯು
ಹಾವೇರಿ: ಸ್ಮಶಾನ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ನಡೆದಿದ್ದ ಅಹಿತಕರ ಘಟನೆಗಳ ನಂತರ ಭಾನುವಾರ ಶಾಂತಿ ಸಭೆ ನಡೆದ ಕೆಲವೇ ಗಂಟೆಗಳಲ್ಲಿ ಪಟ್ಟಣದ ಮೂರು ಕಡೆ ಕಲ್ಲು ತೂರಾಟದ, ಬೆಂಕಿ ಹಚ್ಚಿದ ಪ್ರಕರಣಗಳು ನಡೆದಿವೆ.
ಪಟ್ಟಣದ ಗಾಂಧಿಗಲ್ಲಿ, ದುರ್ಗಾಂಭ ವೃತ್ತ ಮತ್ತು ತಳವಾರಗಲ್ಲಿ ಭಾಗಗಳಲ್ಲಿ ಕಲ್ಲು ತೂರಾಟ ಆರಂಭವಾದಾಗ ಪೊಲೀಸರು ಲಾಠಿ ಪ್ರಹಾರ, ಅಶ್ರವಾಯು ಸಿಡಿಸಿ ಗುಂಪುಗಳನ್ನು ಚದುರಿಸಿದರು. ಗುಂಪೊಂದು ಶಿಗ್ಗಾವಿ ವಿಭಾಗದ ಡಿವೈಎಸ್ಪಿ ಬಿ.ಬಿ. ಸಕ್ರಿ ಅವರತ್ತ ದೊಡ್ಡ ಕಲ್ಲೊಂದನ್ನು ತೂರಿದಾಗ ಅವರು ಅಪಾಯದಿಂದ ಸ್ವಲ್ಪದರಲ್ಲೇ ಪಾರಾದರು. ಈ ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದಾರೆ. ಒಂದು ಕಿರಾಣಿ ಅಂಗಡಿ ಸೇರಿದಂತೆ ಆರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಕೆಲ ನಿವಾಸಿಗಳ ಮೇಲೂ ಹಲ್ಲೆ ಯತ್ನ ನಡೆದಿದ್ದು, ಎರಡು ಆಟೋ ಮತ್ತು ಕೆಲವು ಕೈಗಾಡಿಗಳು ಜಖಂಗೊಂಡಿವೆ ಎಂದು ತಿಳಿದು ಬಂದಿದೆ.
ಶಾಂತಿಸಭೆ : ಜಿಲ್ಲಾಧಿಕಾರಿ ಟಿ. ಮುಕ್ತಾಂಬ ಮತ್ತು ಎಸ್ಪಿ ಎಂ. ಎಸ್. ಪಾಷಾ ಅವರ ನೇತೃತ್ವದಲ್ಲಿ ಶಾಂತಿ ಸಭೆಗಳು ನಡೆದು ನ್ಯಾಯಾಲಯದ ಆದೇಶ ಬರುವವರೆಗೆ ಯೋವುದೇ ಸಮುದಾಯದವರು ವಿವಾದಿತ ಸ್ಮಶಾನದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದೆಂಬ ತೀರ್ಮಾನಕ್ಕೆ ಬದ್ಧರಾಗಿರುವಂತೆ ಮನವೊಲಿಸಿದ್ದಾರೆ.
ಇನ್ನೂ ಎರಡು ಬೆಂಕಿ ಹಚ್ಚಿದ ಘಟನೆಗಳು : ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿದ್ದು, ಭಾನುವಾರ ರಾತ್ರಿ ಅಂಚೆ ಕಚೇರಿ ಮತ್ತು ಟೆಂಪೋ ಸ್ಟ್ಯಾಂಡ್ ಪಕ್ಕದ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿವೆ.
(ಇನ್ಫೋ ವಾರ್ತೆ)