ಒಂದೇ ದಿನದಲ್ಲಿ ಮನೆ ಪ್ಲಾನ್ ಸ್ಯಾಂಕ್ಷನ್ ಮಾಡ್ತಾರಂತೆ ಮೇಯರ್
ಬೆಂಗಳೂರು : ನೀವು, ನಿಮ್ಮ ತಂದೆ, ತಾತ, ಬಂಧುಗಳು ಬೆಂಗಳೂರಿನಲ್ಲಿ ಮನೆ ಕಟ್ಟುವ ಮುನ್ನ ಮಹಾನಗರ ಪಾಲಿಕೆಯಿಂದ ಮನೆಯ ಪ್ಲಾನ್ ಸ್ಯಾಂಕ್ಷನ್ ಮಾಡಿಸಿಕೊಳ್ಳಲು ಪಟ್ಟಿರುವ ಪಾಡು ನಿಮಗೂ ಗೊತ್ತಿರಬಹುದು. ಮಹಾನಗರ ಪಾಲಿಕೆಯ ಕಚೇರಿಗಳ ಮೆಟ್ಟಿಲು ಹತ್ತಿಳಿದು ಪಾದರಕ್ಷೆಗಳೆಲ್ಲಾ ಸವೆದಿರುವ ಸಾಧ್ಯತೆಯೂ ಇದೆ.
ಬಹುಶಃ ನವೆಂಬರ್ ತಿಂಗಳ ಕೊನೆಯಿಂದ ಬೆಂಗಳೂರಿಗರಿಗೆ ಈ ತೊಂದರೆ ಇರಲಾರದು. ತಿಂಗಳುಗಟ್ಟಲೆ ಪ್ಲಾನ್ ಸ್ಯಾಂಕ್ಷನ್ಗಾಗಿ ಮಹಾನಗರಪಾಲಿಕೆ ಕಚೇರಿಗೆ ಅಲೆಯುವ ಅಗತ್ಯವೂ ಇರಲಾರದು. ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ನಕ್ಷೆಗೆ ಮಂಜೂರಾತಿ ನೀಡುವ ಹೊಸ ಪದ್ಧತಿಯನ್ನು ಬೆಂಗಳೂರು ಮಹಾನಗರ ಪಾಲಿಕೆ ಜಾರಿಗೆ ತರುತ್ತಿದೆ. ಈ ಹೊಸ ಯೋಜನೆ ಈ ತಿಂಗಳ ಅಂತ್ಯದಲ್ಲಿ ಜಾರಿಗೆ ಬರುತ್ತದೆ ಎಂದು ಮೇಯರ್ ರಾಮಚಂದ್ರಪ್ಪ ಹೇಳಿದ್ದಾರೆ.
ಬಸವೇಶ್ವರ ಬಡಾವಣೆಯ ಮಹಾನಗರ ಪಾಲಿಕೆಯ ಹೊಸ ವಾರ್ಡ್ ಕಚೇರಿ ಉದ್ಘಾಟಿಸಿದ ಅವರು, ಪಾಲಿಕೆಯ ಆಡಳಿತ ಸುಧಾರಣೆಯ ದೃಷ್ಟಿಯಿಂದ ಹಾಗೂ ಹೈಟೆಕ್ ಯುಗದಲ್ಲಿ ಸಮಯಾವಕಾಶ ಇಲ್ಲದೆ ನಾಗರಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಿಯಮಾವಳಿ ಸರಳ : ಅರ್ಜಿದಾರರು ಸಲ್ಲಿಸುವ ಅರ್ಜಿಯ ಜತೆ ಲಗತ್ತಿಸಲಾದ ಮನೆಯ ನಕಾಶೆ ಪಾಲಿಕೆಯ ನಿಯಮಗಳಿಗೆ ಅನುಗುಣವಾಗಿದಿಯೇ ಎಂಬುದನ್ನು ಪರಿಶೀಲಿಸಲು ಅಗತ್ಯವಾದಷ್ಟು ಎಂಜಿನಿಯರ್ಗಳನ್ನು ನೇಮಿಸಲಾಗುವುದು, ಈ ಎಂಜಿನಿಯರ್ಗಳು ನಕಾಶೆ ಪರಿಶೀಲಿಸಿ ಸೂಕ್ತವಾಗಿದ್ದರೆ ಅರ್ಜಿ ಸಲ್ಲಿಸಿದ ದಿನವೇ ಮಂಜೂರಾತಿ ನೀಡುವರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ವಿ. ಸೋಮಣ್ಣ, ಮಾಜಿ ಮೇಯರ್ ಕೆ.ಎಚ್.ಎನ್. ಸಿಂಹ, ಪಾಲಿಕೆ ಸದಸ್ಯ ಎಂ. ಲಕ್ಮೀನಾರಾಯಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.