ಕೋಲಾರ ಬಳಿ ಬಸ್ ದರೋಡೆ, ನಸ್ರು ಸಹಚರರ ಕೈವಾಡ ಶಂಕೆ
ಬೆಂಗಳೂರು : ಕೋಲಾರ ಹೊರವಲಯದ ಸೋಲೂರು ಗೇಟ್ ಬಳಿ ಶುಕ್ರವಾರ ರಾತ್ರಿ ಶರ್ಮ ಟ್ರಾವಲ್ಸ್ ಬಸ್ಸನ್ನು ದರೋಡೆ ಮಾಡಿ ಪ್ರಯಾಣಿಕರಿಂದ ಸುಮಾರು 3 ಲಕ್ಷ ರುಪಾಯಿ ಮೌಲ್ಯದ ಹಣ ಮತ್ತು ಚಿನ್ನಾಭರಣಗಳನ್ನು ದೋಚಲಾಗಿದೆ. ದರೋಡೆಕೋರರನ್ನು ಬಂಧಿತ ಡಕಾಯಿತ ನಸ್ರು ಸಹಚರರು ಎಂದು ಪೊಲೀಸರು ಶಂಕಿಸಿದ್ದಾರೆ.
ಬಸ್ಸಿನ ಚಾಲಕ ಘಟನೆ ವಿವರಿಸಿರುವುದು ಹೀಗೆ...
ಸಾಮಾನ್ಯ ಪ್ರಯಾಣಿಕರಂತೆಯೇ ಬೆಂಗಳೂರಲ್ಲಿ ಬಸ್ಸಿಗೆ ಹತ್ತಿದ ಕೆಲವು ದರೋಡೆಕೋರರು ಸೋಲೂರು ಗೇಟ್ ಬಳಿ ಮಾರಕಾಸ್ತ್ರಗಳನ್ನು ಹೊರ ತೆಗೆದು ಬಸ್ಸನ್ನು ಹೆದ್ದಾರಿಯಿಂದ ಬೇರೆಡೆ ತಿರುಗಿಸುವಂತೆ ಚಾಲಕನನ್ನು ಬೆದರಿಸಿದರು. ನಂತರ ಟಾಟಾ ಸುಮೋದಲ್ಲಿ ಇನ್ನೂ ಮೂವರು ಬಂದು ಸೇರಿ, ಪ್ರಯಾಣಿಕರಿಗೆ ಚಾಕು ಚೂರಿ ತೋರಿಸಿ, ಹಣ- ಒಡವೆಗಳನ್ನು ದೋಚಿ ಪೇರಿ ಕಿತ್ತರು. ಕೆಲವರು ಮೊಬೈಕುಗಳಲ್ಲಿ ಪರಾರಿಯಾದರು. ಪ್ರಯಾಣಿಕರು ಒತ್ತಾಯಿಸಿದ ಕಾರಣ ಬೆಂಗಳೂರಿಗೇ ವಾಪಸ್ಸು ಬಂದೆವು.
ದರೋಡೆಕೋರರು ಬಸ್ಸನ್ನು ಬೆಂಗಳೂರಲ್ಲೇ ಹತ್ತಿರುವುದರಿಂದ ಪ್ರಕರಣ ಬೆಂಗಳೂರು ಪೊಲೀಸರಿಗೇ ಸಂಬಂಧಪಡುತ್ತದೆ. ಈ ಈ ಹಿಂದೆ ನೀಲಿ ಮಾರುತಿ ಹಾಗೂ ಜೆನ್ ಕಾರುಗಳಲ್ಲಿ ಸಂಚರಿಸುತ್ತ ನಸ್ರು ತಂಡ ಕೋಲಾರ ರಸ್ತೆಯಲ್ಲೇ ಸರಣಿ ದರೋಡೆಗಳನ್ನು ಮಾಡಿದೆ. ನಸ್ರುವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಅವನ ಇತರೆ ಸಹಚರರಾದ ಮುಸ್ತಫ ಮತ್ತು ಜಮೀಲ್ ಒಂದು ವರ್ಷದಿಂದ ತಲೆ ತಪ್ಪಿಸಿಕೊಂಡಿದ್ದಾರೆ. ಈ ದರೋಡೆಯನ್ನು ಅವರೇ ನಡೆಸಿರಬಹುದೆಂಬ ಬಲವಾದ ಅನುಮಾನವಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ.
(ಇನ್ಫೋ ವಾರ್ತೆ)