ಸ್ಮಶಾನ ಭೂಮಿ ವಿವಾದ ರಾಣೆಬೆನ್ನೂರು ಉದ್ರಿಕ್ತ
ಹುಬ್ಬಳ್ಳಿ: ಎರಡು ಉದ್ರಿಕ್ತ ಸಮುದಾಯಗಳ ನಡುವೆ ನಡೆಯುತ್ತಿದ್ದ ಘರ್ಷಣೆ ತಪ್ಪಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಇಲ್ಲಿಗೆ 90 ಕಿಲೋಮೀಟರ್ ದೂರದ ರಾಣೆಬೆನ್ನೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ರುದ್ರ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕೊಮುಗಳ ನಡುವೆ ಉಂಟಾದ ಮಾತಿನ ಚಕಮಕಿ, ಪರಸ್ಪರ ಕಲ್ಲು ತೂರುವ ಹಂತ ಮುಟ್ಟಿದಾಗ ಪೋಲೀಸರು ಲಾಠಿ ಚಾರ್ಜ್ ಮಾಡಿದರು. ಗುಂಪುಗಳು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿದರು. ಈ ಹಂತದಲ್ಲಿ ಉದ್ರಿಕ್ತ ಗುಂಪೊಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿತಲ್ಲದೆ ಆಟೋರಿಕ್ಷಾ ಮತ್ತು ಇತರ ಕೆಲವು ವಾಹನಗಳಿಗೆ ಕಲ್ಲು ತೂರಿತು. ಘರ್ಷಣೆ ಮುಂದುವರಿದಾಗ ಗುಂಪು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಚದುರಿಸಲಾಯಿತೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ : ಪಟ್ಟಣದ ಬಸ್ ನಿಲ್ದಾಣದ ಸಮೀಪ ಇದ್ದ ಸ್ಮಶಾನ ಯಾರಿಗೆ ಸೇರಬೇಕು ಎಂಬ ಬಗ್ಗೆ ಎರಡು ಸಮುದಾಯಗಳ ನಡುವೆ ಕಳೆದ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಿತ್ತು.
ವಿವಾದಿತ ಭೂಮಿಯಲ್ಲಿ ಎರಡು ಕಟ್ಟಡಗಳ ಕೆಲಸ ನಡೆಯುತ್ತಿತ್ತು. ಇತ್ತೀಚೆಗೆ ಜಿಲ್ಲಾಧಿಕಾರಿಗಳು ವಿವಾದ ಬಗೆಹರಿಸಿ ಎರಡೂ ಕಟ್ಟಡಗಳನ್ನೂ ಒಡೆಸಿಹಾಕಿದ್ದರು. ಶನಿವಾರ ಸಂಜೆ ಒಂದು ಸಮುದಾಯದವರು ತಮ್ಮ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸಲು ಮತ್ತು ಅಲ್ಲಿರುವ ದೇವಾಲಯದಲ್ಲಿ ಪೂಜೆ ಮಾಡಲು ಸೇರಿದ್ದರು. ಸ್ಮಶಾನಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದನ್ನು ಇನ್ನೊಂದು ಸಮುದಾಯದವರು ಆಕ್ಷೇಪಿಸಿದಾಗ ಈ ಘಟನೆ ನಡೆದಿದೆ. ಗುಂಪುಗಳ ದಾಳಿಯಲ್ಲಿ ಐದು ಅಂಗಡಿಗಳನ್ನೂ ಲೂಟಿ ಮಾಡಲಾಗಿದೆ.
ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಉದ್ರಿಕ್ತವಾಗೇ ಇದೆ. ಪಟ್ಟಣದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.