ರಾಜ್ಯ ಪ್ರವಾಸೋದ್ಯಮ ನಿಗಮದ ಮೈಗಳ್ಳತನಕ್ಕೆ ಸದನದಲ್ಲಿ ಛೀಮಾರಿ
ಬೆಂಗಳೂರು : ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ತಾನು ಗುತ್ತಿಗೆ ಪಡೆದಿರುವ 1.16 ಕೋಟಿ ರೂಪಾಯಿ ಮೌಲ್ಯದ ಸುಮಾರು ಆರು ಸಾವಿರ ಚದರ ಅಡಿ ಪ್ರದೇಶವನ್ನು ಬಳಸಿಕೊಳ್ಳದೆ ಇರುವುದರಿಂದ ಕಳೆದುಕೊಂಡಿದೆ.
ಶುಕ್ರವಾರದಂದು ಸಾರ್ವಜನಿಕ ಉದ್ಯಮ ಕುರಿತು ಸದನದಲ್ಲಿ ಮಂಡಿಸಿದ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ. ಸರಕಾರ ನೀಡಿದ ಜಾಗದಲ್ಲಿ ಕಳೆದ 24ವರ್ಷಗಳಿಂದ ಕಟ್ಟಡ ನಿರ್ಮಾಣ ಮಾಡುವಲ್ಲಿ ಕೆಎಸ್ಟಿಡಿಸಿ ತೀರಾ ನಿರಾಸಕ್ತಿ ಹೊಂದಿದ್ದರ ಪರಿಣಾಮವಾಗಿ ಈ ಜಾಗ ಕೈ ಬಿಟ್ಟು ಹೋಗುತ್ತಿದೆ. ಇಂತಹುದೇ ಇನ್ನೊಂದು ವರದಿಯ ಪ್ರಕಾರ ಉಡುಪಿಯ ಮಲ್ಪೆ ಬೀಚ್ನಲ್ಲಿ ರೆಸಾರ್ಟ್ ನಿರ್ಮಾಣ ಮಾಡಬೇಕಾಗಿದ್ದು , ಕೆಎಸ್ಟಿಡಿಸಿ ತನ್ನ ಮೈಗಳ್ಳತನ ಪ್ರದರ್ಶಿಸಿದೆ. ಸಾಕಷ್ಟು ತಂತ್ರಜ್ಞಾನವಿಲ್ಲದೆ ಮಲ್ಪೆ ಬೀಚ್ನಲ್ಲಿ ರೆಸಾರ್ಟ್ ನಿರ್ಮಾಣ ಕಾರ್ಯವನ್ನು ವಹಿಸಿಕೊಂಡಿರುವುದೇ ತಪ್ಪು. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಮೊದಲೇ ಅನುಮತಿ ಪಡೆಯದೇ ಇರುವುದು ಕಾನೂನಿಗೆ ವಿರುದ್ಧವಾದುದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಉಪಗುತ್ತಿಗೆ ನೀಡುವುದು ನಿಗಮದ ಕಾನೂನಿಗೆ ಸಮ್ಮತವಾದುದಲ್ಲ. ಅಲ್ಲದೆ ಬೀದರ್ನಲ್ಲಿ ಉಪಗುತ್ತಿಗೆದಾರರಾಗಿರುವ ಬರಿದ್ ಶಾಹಿ ಮಯೂರ ಗುಂಪು ಬಾಕಿ ಇರಿಸಿಕೊಂಡಿರುವ 5.62 ಲಕ್ಷ ರೂಪಾಯಿಯನ್ನು ವಸೂಲಿ ಮಾಡುವ ಕುರಿತೂ ಯಾವುದೇ ಪ್ರಯತ್ನ ನಡೆದಿಲ್ಲ. ಕೈಬಿಟ್ಟು ಹೋಗುತ್ತಿರುವ ಜಾಗವನ್ನು ಮತ್ತೆ ದೊರಕಿಸಿಕೊಳ್ಳುವ ಬಗ್ಗೆಯೂ ಕೆಎಸ್ಟಿಡಿಸಿ ಪ್ರಯತ್ನ ನಡೆಸಿಲ್ಲ ಎಂದು ವರದಿ ಕೆಎಸ್ಟಿಡಿಸಿಗೆ ಛೀಮಾರಿ ಹಾಕಿದೆ.
(ಇನ್ಫೋ ವಾರ್ತೆ)