ಮಿನುಗುತಿವೆ ಮುಗಿಲಲ್ಲಿ ಚುಕ್ಕಿಗಳು
ಬೆಂಗಳೂರು : ಮನೆಯ ಮುಂದೆ ಹಚ್ಚಿಟ್ಟ ಕಾರ್ತಿಕ ದೀಪಗಳ ಸೊಬಗಳನ್ನು ಕಾಣುತ್ತಾ ಮಳೆರಾಯ ಮೋಡದ ಮರೆಯಲ್ಲಿಯೇ ಅಡಗಿ ಕುಳಿತಿದ್ದಾನೆ. ರಾಜ್ಯದ ಬಹುತೇಕ ಎಲ್ಲೆಡೆ ಆಕಾಶ ನಿರ್ಮಲವಾಗಿದೆ. ಕಗ್ಗತ್ತಲ ನೀಲಾಕಾಶದಲ್ಲಿ ಚುಕ್ಕಿಗಳು ಆನಂದದಿಂದ ಮಿನುಗುತ್ತಿವೆ.
ಮಳೆಯ ಸುಳಿವಿಲ್ಲದಿದ್ದರೂ ರಾಜ್ಯದಲ್ಲಿ ಒಣಹವೆಯಂತೂ ಇದ್ದೇ ಇದೆ. ರಾಜ್ಯದ ಕೆಲವೆಡೆ ತಂಪಾದ ಹಿತವಾದ ಹಾಗೂ ಆಹ್ಲಾದಕರ ಗಾಳಿಯೂ ಸುಳಿದಾಡುತ್ತಿದೆ. ಕರ್ನಾಟಕದ ಕೆಲವೆಡೆ ಕನಿಷ್ಠ ಉಷ್ಣಾಂಶದಲ್ಲಿ ಅಲ್ಪ ಏರಿಕೆ ಆಗಿದೆ. ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಕಂಡು ಬಂದಿದೆ.
ರಾಜ್ಯದಲ್ಲಿ ರಾತ್ರಿಯ ಕನಿಷ್ಠ ಉಷ್ಣಾಂಶ ರಾಯಚೂರಿನಲ್ಲಿ 14.8 ಡಿಗ್ರಿ ದಾಖಲಾಗಿದೆ. ಹವಾಮಾನ ವೀಕ್ಷಣನಾಲಯ ಭಾನುವಾರ ಬೆಳಗ್ಗೆವರೆಗೆ ನೀಡಿರುವ ಮುನ್ಸೂಚನೆಯಂತೆ ಸಾಮಾನ್ಯವಾಗಿ ರಾಜ್ಯದಲ್ಲಿ ಒಣಹವೆ ಮುಂದುವರಿದಿರುತ್ತದೆ. ಉಳಿದಂತೆ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ರಾತ್ರಿಯ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.