ಎಸ್. ಬಂಗಾರಪ್ಪ ಅಕ್ರಮ ಆಸ್ತಿ ಹಗರಣ: ಕಾಯ್ದಿಟ್ಟ ತೀರ್ಪು
ನವದೆಹಲಿ : ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಆದಾಯ ಮೀರಿ ಆಸ್ತಿ ಪಾಸ್ತಿ ಮಾಡಿದ್ದಾರೆ ಎಂದು ಆರೋಪಿಸಿ ಸಿ.ಬಿ.ಐ ಹೂಡಿದ್ದ ಮೊಕದ್ದಮೆಯನ್ನು ರದ್ದು ಪಡಿಸಿದ ಕರ್ನಾಟಕ ಹೈಕೋರ್ಟ್ ತನ್ನ ವ್ಯಾಪ್ತಿಯನ್ನು ಮೀರಿದೆ ಎಂಬ ಅಭಿಪ್ರಾಯವನ್ನು ಸರ್ವೋನ್ನತ ನ್ಯಾಯಾಲಯ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ತಳೆದಿರುವ ಈ ಅಭಿಪ್ರಾಯದಿಂದಾಗಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಗೆ ಕಾನೂನು ಸಮರದಲ್ಲಿ ಭಾರಿ ಹಿನ್ನಡೆ ಉಂಟಾದಂತಾಗಿದೆ. ಈ ಹಗರಣದ ಮೊಕದ್ದಮೆಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ 1999ರ ಮಾರ್ಚ್ 20ರಂದು ಸಿಬಿಐ ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ರಜೆ ಕಾಲದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ.ಟಿ. ಥಾಮಸ್ ಅವನ್ನೊಳಗೊಂಡ ಖಂಡಪೀಠ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.
ಬಂಗಾರಪ್ಪ ಅವರು, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು 7.78 ಕೋಟಿ ರುಪಾಯಿ ಅಕ್ರಮ ಸಂಪತ್ತನ್ನು ಗಳಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಲು ಅವಕಾಶ ನೀಡಿ ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳಬಹುದಿತ್ತು ಎಂಬುದು ಸರ್ವೋನ್ನತ ನ್ಯಾಯಾಲಯದ ಅಭಿಪ್ರಾಯವಾಗಿದೆ.
ಬಂಗಾರಪ್ಪ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಾಲ್ ಹಾಗೂ ಸಿಬಿಐ ಪರ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ತಮ್ಮ ವಾದ ಮಂಡಿಸಿದರು. ಈ ಹಿಂದೆ ಬಂಗಾರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯ ಮೊಕದ್ದಮೆಯನ್ನು ರದ್ದು ಮಾಡಿತ್ತು.