ದಾನಿಗಳಿಗೆ ತಿರುಪತಿ ವೆಂಕಟೇಶನ ದರ್ಶನಕ್ಕೆ ವಿಶೇಷ ಪಾಸ್
ತಿರುಪತಿ : ತಿರುಮಲ ತಿರುಪತಿ ದೇವಸ್ಥಾನದ ದತ್ತಿಗೆ ದಾನ ನೀಡಿರುವವರು ಇನ್ನು ಮುಂದೆ ಪ್ರತಿ ಭೇಟಿಯಲ್ಲೂ ಅಧಿಕಾರಿಗಳನ್ನು ಕಂಡು ದರ್ಶನದ ಅನುಮತಿ ಪತ್ರ ಪಡೆಯುವ ಅಗತ್ಯವಿಲ್ಲ. ಸದ್ಯದಲ್ಲೇ ಪಾಸೊಂದನ್ನು ದೇವಸ್ಥಾನದ ಆಡಳಿತ ಮಂಡಳಿ ವಿತರಿಸಲಿದ್ದು, ಅದನ್ನು ಉಪಯೋಗಿಸಿಕೊಂಡು ಯಾವಾಗ ಬೇಕಾದರೂ ದರ್ಶನ ಪಡೆಯಬಹುದಾಗಿದೆ.
ಮಂಗಳವಾರ ನಡೆದ ವಾರದ ಸಹಕಾರ ಸಭೆಯ ಅಧ್ಯಕ್ಷತೆ ವಹಿಸಿದ್ದ ದತ್ತಿಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಕೃಷ್ಣಯ್ಯ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ದೂರದೂರುಗಳಿಂದ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಅಡಚಣೆ ಆಗದಂತೆ ದರ್ಶನ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು. ವಾಹನ ಸಂಚಾರ ದಟ್ಟಣೆ ತಪ್ಪಿಸಲು ಸೂಕ್ತ ಶಿಸ್ತಿನ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಹಾಗೂ ವಾಹನಗಳನ್ನು ಮಿತಿ ಮೀರಿದ ವೇಗದಲ್ಲಿ ಓಡಿಸುವವರನ್ನು ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದರು.
ಲಾಡು ಪ್ರಸಾದ ವಿತರಿಸಲು ಇನ್ನಷ್ಟು ಸಿಬ್ಬಂದಿಯನ್ನು ನೇಮಿಸಿಕೊಂಡು, ಉದ್ದನೆಯ ಕ್ಯೂಗಳನ್ನು ತಪ್ಪಿಸಲು ಮತ್ತಷ್ಟು ಪ್ರಸಾದ ವಿತರಣೆಯ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ಪಿ.ಕೃಷ್ಣಯ್ಯ ತಿಳಿಸಿದ್ದಾರೆ.
(ಯುಎನ್ಐ)