ತರಳಬಾಳು ವಿದ್ಯಾಸಂಸ್ಥೆಗೆ ಕೆನಡಾ ಪ್ರತಿನಿಧಿಗಳ ಭೇಟಿ
ದಾವಣಗೆರೆ : ಭಾರತದಲ್ಲಿನ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಸಿಖ್ ಸಮುದಾಯದ ಜನಜೀವನ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಅಧ್ಯಯನ ನಡೆಸಲು ಕಳೆದ ಎರಡು ತಿಂಗಳಿನಿಂದ ಪ್ರವಾಸದಲ್ಲಿರುವ ಕೆನಡಾ ವಿಶ್ವವಿದ್ಯಾಲಯದ 18 ಜನರ ತಜ್ಞರ ತಂಡ ಇಲ್ಲಿನ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅನುಭವ ಮಂಟಪಕ್ಕೆ ಭೇಟಿ ನೀಡಿತ್ತು.
ಪ್ರೊ. ಬ್ರಾಯಂಟ್ ಅವರ ನೇತೃತ್ವದ ಈ ತಂಡ ಈಗಾಗಲೇ ಹರಿದ್ವಾರ, ಋಷಿಕೇಶ್, ಪಾಟಿಯಾಲಾ, ದೇಶದ ಹಲವು ಗುರುದ್ವಾರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅನುಭವ ಮಂಟಪಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಬ್ರಾಯೆಂಟ್ ಕೆನಡಾದಲ್ಲಿ ಕೂಡ ಹಿಂದೂ, ಮುಸ್ಲಿಂ, ಸಿಖ್ ಹಾಗೂ ಬುದ್ಧ ಧರ್ಮೀಯರಿದ್ದು, ಅವರ ಧರ್ಮ ಪಾಲನೆಗೆ ಹಾಗೂ ಮತಾಚರಣೆಗೆ ತಮ್ಮ ದೇಶ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದರು.
ಬ್ರಾಯೆಂಟ್ ನೇತೃತ್ವದ ತಂಡದಲ್ಲಿದ್ದ ಅಧ್ಯಯನಿಗಳು ಭಾರತೀಯ ಸಂಸ್ಕೃತಿಯ ರೀತ್ಯ ಸೀರೆ, ಕುಪ್ಪುಸ ತೊಟ್ಟು, ಹಣೆಗೆ ಸಿಂಧೂರವಿಟ್ಟು, ಜಡೆಗೆ ಹೂ ಮುಡಿದು ಬಂದಿದ್ದು ಅವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಇರುವ ಗೌರವವನ್ನು ಸೂಚಿಸುತ್ತಿತ್ತು. (ದಾವಣಗೆರೆ ಪ್ರತಿನಿಧಿಯಿಂದ)