ಬೆಂಗಳೂರಿನ ರಸ್ತೆಗಳಲ್ಲಿ ಒಟ್ಟು 26,284 ಗುಂಡಿಗಳು
ಬೆಂಗಳೂರು : ಮುಖ್ಯಮಂತ್ರಿ ಕೃಷ್ಣ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಕೃಷ್ಣ ಅಧಿಕಾರ ವಹಿಸಿಕೊಂಡ ತರುಣದಲ್ಲಿ ಆದ್ಯತೆಯ ಮೇಲೆ ಮೊದಲು ಮಾಡಿದ ಕೆಲಸ - ಹದಗೆಟ್ಟಿದ್ದ ಬೆಂಗಳೂರು ರಸ್ತೆಗಳ ರಿಪೇರಿ. ಈಗ ವರ್ಷ ತುಂಬವ ಹೊತ್ತಿಗಾಗಲೇ ಬೆಂಗಳೂರಿನ ಬಹುತೇಕ ಎಲ್ಲ ರಸ್ತೆಗಳೂ ಮತ್ತೆ ಹಾಳಾಗಿವೆ.
ಬೆಂಗಳೂರು ರಸ್ತೆಯಲ್ಲಿ ಎಷ್ಟು ಹಳ್ಳವಿದೆ ಎಂಬ ಲೆಕ್ಕವನ್ನು ಯಾರಾದರೂ ಇಟ್ಟಿದ್ದಾರೆಯೇ? ನೀವೂ, ನಾವೂ ಖಂಡಿತಾ ಇಟ್ಟಿಲ್ಲ. ಆದರೆ, ಬೆಂಗಳೂರು ಮಹಾ ನಗರ ಪಾಲಿಕೆ ಪುರಸೊತ್ತು ಮಾಡಿಕೊಂಡು ಬೆಂಗಳೂರು ನಗರದ ಗುಂಡಿಗಳನ್ನು ಲೆಕ್ಕ ಮಾಡಿದೆ. ಪಾಲಿಕೆಯ ಆಯುಕ್ತ ಜಯರಾಜ್ ಹಾಗೂ ಮೇಯರ್ ಎಂ. ರಾಮಚಂದ್ರಪ್ಪ ಅವರ ರೀತ್ಯ 26 ಸಾವಿರದ 284 ಗುಂಡಿಗಳು ಇವೆಯಂತೆ.
ಆಶ್ಚರ್ಯ ಪಡಬೇಡಿ, ಅಕಸ್ಮಾತ್ ಗುಂಡಿಗಳು ಹೆಚ್ಚಾಗಿದ್ದರೆ, ಅವು ಎಣಿಕೆ ಮಾಡಿದ ನಂತರ ಬಿದ್ದಿರುವ ಗುಂಡಿಗಳು, ಒಂದೊಮ್ಮೆ ಕಡಿಮೆ ಇದ್ದರೆ, ಈಗಾಗಲೇ ಅವು ರಿಪೇರಿ ಆಗಿರುವುವು ಎಂದೂ ನೀವು ಭಾವಿಸಬಹುದು. ಬೀರ್ಬಲ್ ಕಾಗೆಗಳ ಲೆಕ್ಕ ಹೇಳಿದ ಕತೆಯಂತೆಯೇ ಬೆಂಗಳೂರು ಗುಂಡಿಗಳ ವ್ಯಥೆ.
ಅಂದಹಾಗೆ ಹಳ್ಳಕೊಳ್ಳ ಬಿದ್ದ ಬೆಂಗಳೂರು ರಸ್ತೆಗಳನ್ನು ರಿಪೇರಿ ಮಾಡುವ ಕೆಲಸ ಸಮರೋಪಾದಿಯಲ್ಲಿ ಸಾಗಿದೆ. ನಿನ್ನೆ, ಮೊನ್ನೆ ಬಿದ್ದ ಮಳೆ ಈ ಕೆಲಸಕ್ಕೆ ಕೊಂಚ ಅಡ್ಡಿ ಮಾಡಿತ್ತು ಎನ್ನುತ್ತಾರೆ ಜೈರಾಜ್. ಬರಿ ರಿಪೇರಿಯಲ್ಲ ವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದರೂ, ವೈಜ್ಞಾನಿಕವಾಗಿಯಾದರೂ ಗುಂಡಿ ಮುಚ್ಚುತ್ತಿದ್ದಾರಲ್ಲ ಎಂದು ಸಂತೋಷ ಪಡೋಣ.
ವಾಹನ ನಿಲುಗಡೆ ಶುಲ್ಕ : ಅಂದಹಾಗೆ ಇನ್ನು ಮುಂದೆ ನೀವು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲ್ಲಿಸಿದರೆ, ನಿಲುಗಡೆ ಶುಲ್ಕ ತೆರಲೇಬೇಕು. ಇದು ಪಾಲಿಕೆಯ ಆದಾಯ ಹೆಚ್ಚಿಸಲು ಕೈಗೊಂಡಿರುವ ಕ್ರಮ ಅಲ್ಲವಂತೆ, ಅನಧಿಕೃತವಾಗಿ ಈಗಾಗಲೇ ಕೆಲವರು ಮಾಡುತ್ತಿರುವ ಶುಲ್ಕ ವಸೂಲಿ ತಡೆದು, ಸಂಚಾರ ಸುಗಮಗೊಳಿಸಿ, ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ಪ್ರಯತ್ನ ಎಂದೂ ಜೈರಾಜ್ ಹಾಗೂ ರಾಮಚಂದ್ರಪ್ಪ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರದ ಪ್ರಮುಖ 78 ರಸ್ತೆಗಳನ್ನು ಎ, ಬಿ, ಸಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ, ಆ ಸ್ಥಳಗಳಲ್ಲಿ ನಿಲ್ಲುವ ವಾಹನಗಳಿಂದ ಶುಲ್ಕ ವಸೂಲಿ ಮಾಡುವುದಾಗಿ ಅವರು ಹೇಳಿದರು. ಈಗಾಗಲೇ 16 ರಸ್ತೆಗಳ ಟೆಂಡರ್ ಪ್ರಸ್ತಾವನೆ ಅಂತಿಮಗೊಳಿಸಲಾಗಿದ್ದು, ಉಳಿದವುಗಳಿಗೆ ಟೆಂಡರ್ ಕರೆದು ಇಲ್ಲವೆ ಹರಾಜಿನ ಮೂಲಕ ಗುತ್ತಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅಂದಹಾಗೆ ಈ ಶುಲ್ಕ ವಸೂಲಿ ಬೆಂಗಳೂರಿಗರಿಗೆ ಕನ್ನಡ ರಾಜ್ಯೋತ್ಸವದ ಕೊಡುಗೆ. ಇದು ಜಾರಿಗೆ ಬರುವುದು ನವೆಂಬರ್ 1ರಿಂದ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...