ಎನ್ಡಿಎ ವರ್ಷದ ಸಂಭ್ರಮಕ್ಕೆ ಆರೆಸ್ಸೆಸ್ ಅಪಸ್ವರ
ಆಗ್ರಾ: ಶುಕ್ರವಾರದಿಂದ ಇಲ್ಲಿ ಪ್ರಾರಂಭವಾದ ಆರೆಸ್ಸೆಸ್ ಸಮಾವೇಶ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಎಂದು ಟೀಕಿಸಿದೆ.
ಯಾವುದೇ ನಾಯಕ ಅಥವಾ ಪಕ್ಷದ ಹೆಸರು ಹೇಳದೆ, ಎನ್ಡಿಎ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಎಂದು ಹೇಳಿರುವ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಮೋಹನ್ರಾವ್ ಭಾಗವತ್, ಸರಕಾರದಲ್ಲಿರುವ ಕೆಲವು ವ್ಯಕ್ತಿಗಳು ಹಲವಾರು ವಿಷಯಗಳಲ್ಲಿ ಒತ್ತಡಕ್ಕೆ ಮಣಿದು ರಾಜಿ ಮಾಡಿಕೊಳ್ಳುತ್ತಿದ್ದಾರೆ ಯಾವುದೇ ರಂಗಗಳಲ್ಲಿ ನಿರೀಕ್ಷಿತ ಫಲಿತಾಂಶ ದಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಲ ವಿಚಾರಗಳಲ್ಲಿ ರಾಜಿ: ಸಂಘದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ರಕ್ಷಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ದೇಶ ಹೊರಲಾಗದ ಸಾಲದ ಬಲೆಯಲ್ಲಿ ಬಿದ್ದಿದೆ ಇದರಿಂದ ರಾಷ್ಟ್ರೀಯ ಹಿತಾಸಕ್ತಿ ವಿಚಾರಗಳಲ್ಲೂ ರಾಜಿ ಮಾಡಿಕೊಳ್ಳಲಾಗುತ್ತಿದೆ. ಆರೆಸ್ಸೆಸ್ ಯಾವುದೇ ನಿರ್ಧಿಷ್ಟ ಪಕ್ಷವನ್ನು ಬೆಂಬಲಿಸುತ್ತಿಲ್ಲ ಬದಲಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡಿದೆ ಎಂದು ಹೇಳಿದ್ದಾರೆ.
ಚರ್ಚ್ಗಳು ಮತಾಂತರ ಕೆಲಸದಲ್ಲಿ ಭಾಗಿಗಳಾಗಿವೆ ಎಂದು ತೀರ್ವ ವಾಗ್ದಾಳಿ ನಡೆಸಿದ ಅವರು, ಈಶಾನ್ಯ ರಾಜ್ಯಗಳಲ್ಲಿ ಕ್ರೆೃಸ್ತರ ಹಿಡಿತ ಜಾಸ್ತಿಯಾಗುತ್ತಿದ್ದು ಅವರು ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಎನ್ಡಿಎ ಸರಕಾರಕ್ಕೆ ಅದರಲ್ಲೂ ಬಿಜೆಪಿಗೆ ತನ್ನ ಬಂಬಲಿತ ಸಂಘಟನೆಯಿಂದ ಈ ಟೀಕೆ ಬಂದಿರುವುದರಿಂದ ತೀರ್ವ ಮುಜುಗರ ಎದುರಿಸುವ ಪರಿಸ್ಥಿತಿ ಉಂಟಾಗಿದೆ.