ರಾಜ್ಯ-ದ-ಲ್ಲಿ ಶೀಘ್ರ-ವೇ ಡಾಟಾ ಪೋಸ್ಟ್ ಸೌಲ-ಭ್ಯ
ಮಂಗಳೂರು: ಅಂಚೆ ಇಲಾಖೆಯ ಕರ್ನಾಟಕ ವೃತ್ತದಲ್ಲಿ ಶೀಘ್ರವೇ ಡಾಟಾ ಪೋಸ್ಟ್ ಸೌಲಭ್ಯ ಆರಂಭಗೊಳ್ಳಲಿದೆ.
ಮಂಗಳೂರಿನ ಹಂಪನಕಟ್ಟೆ ಅಂಚೆಯಲ್ಲಿ ಶನಿವಾರ ಗ್ರೀಟಿಂಗ್ ಪೋಸ್ಟ್ ಎಂಬ ಹೊಸ ಅಂಚೆ ಸೇವೆಯನ್ನು ಕಾರ್ಯಾರಂಭಗೊಳಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀಮತಿ ಕೆ. ಎನ್. ಕೆ. ಕಾರ್ತ್ಯಾಯಿನಿ ಈ ವಿಷಯ ತಿಳಿಸಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಅಂಚೆ ವೃತ್ತಗಳಲ್ಲಿ ಈ ವರ್ಷಾಂತ್ಯ ಡಾಟಾ ಪೋಸ್ಟ್ ಸೇವೆ ಲಭ್ಯವಾಗಲಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಗೆ ಓಗಿಲ್ವಿ (ogilvy world wide) ಸಂಸ್ಥೆ ಜತೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದರು.
ನೋಂದಾಯಿತ ಅಂಚೆ ವಿತರಣೆಗೆ ಸಂಬಂಧಿಸಿ ಗ್ರಾಹಕರ ದೂರುಗಳನ್ನು ಪರಿಹರಿಸಲು ಇಲಾಖೆ , ಸುವಿಧಾ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದ್ದು ದಕ್ಷಿಣ ಕರ್ನಾಟಕ ವಲಯದಲ್ಲಿ ಇದನ್ನು ಬಳಸಲಾಗುತ್ತಿದೆ. ಇದರಿಂದ ದೂರುಗಳ ಬಗ್ಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿದೆ ಎಂದವರು ವಿವರಿಸಿದರು.
ದಕ್ಷಿಣ ಕರ್ನಾಟಕ ವಲಯದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ 10 ಹೊಸ ಅಂಚೆ ಕಚೇರಿಗಳನ್ನು ವರ್ಷಾಂತ್ಯದೊಳಗೆ ತೆರೆಯಲಾಗುವುದು ಎಂದು ಕಾರ್ತ್ಯಾಯಿನಿ ತಿಳಿಸಿದರು.
ಅಂಚೆ ಇಲಾಖೆ ಈ ಗ್ರಾಹಕ ಸ್ನೇಹಿಯಾಗಿದೆ. ಇಲಾಖೆ ಹೊಸದಾಗಿ ಆರಂಭಿಸಿದ ಎಕ್ಸ್ಪ್ರೆಸ್ ಪಾರ್ಸೆಲ್ ಪೋಸ್ಟ್ ಮೈಸೂರು, ಗೌರಿಬಿದನೂರುಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ರಿಟೈಲ್ ಪೋಸ್ಟ್ ಮೂಲಕ ಕರಕುಶಲವಸ್ತುಗಳು , ಮೈಸೂರು ಅಗರಬತ್ತಿಗಳನ್ನು ಮಾರಾಟ ಮಾಡಲು ಯೋಜಿಸಲಾಗಿದೆ ಎಂದವರು ನುಡಿದರು.
ಅಂಚೆ ಇಲಾಖೆ ಉಳಿತಾಯ ಖಾತೆ 1.8 ಲಕ್ಷ ಕೋಟಿ ರೂಪಾಯಿ ಠೇವಣಿ ಹೊಂದಿದ್ದು ಬ್ಯಾಂಕಿಂಗ್ ವ್ಯವಹಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಬಗ್ಗೆ ಪರ್ಯಾಲೋಚನೆಗಳು ನಡೆದಿವೆ ಎಂದೂ ಕಾರ್ತ್ಯಾಯಿನಿ ಹೇಳಿದರು.
(ಮಂಗಳೂರು ಪ್ರತಿನಿಧಿಯಿಂದ)