ದಸರಾ ವಸ್ತು ಪ್ರದರ್ಶನ ಪ್ರವೇಶ ದರ ಹೆಚ್ಚಳಕ್ಕೆ ವಿರೋಧ
ಮೈಸೂರು : ವಿಶ್ವವಿಖ್ಯಾತ ದಸರೆಯ ನಿಮಿತ್ತ ಪ್ರತಿವರ್ಷವೂ ನಡೆಯುವ ದಸರಾ ವಸ್ತು ಪ್ರದರ್ಶನ ಈ ಬಾರಿಯೂ ನಡೆಯುತ್ತಿದೆ. ಆದರೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಪ್ರದರ್ಶನದ ಪ್ರವೇಶ ಶುಲ್ಕ ಹೆಚ್ಚಿಸಿರುವುದು ಮೈಸೂರು ನಾಗರಿಕರ ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣಾಗಿದೆ.
ಈ ಸಂಬಂಧ ಮೈಸೂರು ಒಂಟಿಕೊಪ್ಪಲ್ ಕನ್ನಡ ಗೆಳೆಯರ ಬಳಗದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರವೇಶ ಶುಲ್ಕ ಜನಸಾಮಾನ್ಯರಿಗೆ ಹೊರೆಯಾಗಿರುವುದರಿಂದ ಕೂಡಲೇ ಪ್ರವೇಶ ಶುಲ್ಕ ದರವನ್ನು ಇಳಿಸುವಂತೆ ಬಳಗದ ಅಧ್ಯಕ್ಷ ಚಿಕ್ಕಪುಟ್ಟಿ ಹಾಗೂ ಸಂಚಾಲಕ ಮಾದೇಶ್ ಅವರು ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.
ಪ್ರವೇಶ ದ್ವಾರದ ನಿಬಂಧನೆಗಳಿಗೆ ವಿರುದ್ಧವಾಗಿ 10 ರುಪಾಯಿ ಪ್ರವೇಶ ಶುಲ್ಕ ಪಡೆಯಲಾಗುತ್ತಿದೆ. ಆದರೆ, ನಿಬಂಧನೆಯಲ್ಲಿ 5 ರುಪಾಯಿ ಪಡೆಯುವಂತೆ ಮಾತ್ರ ತಿಳಿಸಲಾಗಿದೆ. ಆದರೆ, ಏಕಾಏಕಿ 10 ರುಪಾಯಿ ಪ್ರವೇಶ ಶುಲ್ಕ ಪಡೆಯುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಬಳಗದ ಕಾರ್ಯಕರ್ತರು ಪಾಲ್ಗೊಂಡಿದ್ದರು.